Untitled Document
Sign Up | Login    
ಕೋಮಲ ಬೆರಳಿಗೆ

ಕೋಮಲ ಬೆರಳುಗಳಿಗೆ
ತೊಡಿಸಿದ ಉಂಗುರ ಮೃದುವೆ?
ಅಂದುಕೊಳ್ಳ ಬೇಡ ಹುಡುಗಿ
ಮೃದು ಮಧುರವೆಂದು ಮದುವೆ.

ಕುದಿವ ಲಾವಾರಸವಿದೆ ಒಳಗೆ
ಚಿಮ್ಮುವ ಜ್ಯೋತ್ಸ್ನೆಯ ಹೊನಲೂ ಇದೆ ಹೊರಗೆ.
ಪ್ರೀತಿಯ ಉಕ್ಕುವ ಗಂಗೋತ್ರಿಯ
ಬೆಳ್ಳನೆ ನೊರೆ ಹಾಲು
ಕದಡಿದ ಮಾತ್ಸರ್ಯದ ಚರಂಡಿ ನೀರು
ಎರಡಕ್ಕೂ ಜೀವನ ಭೂಮಿ ಇಂಬು;
ಮುಳ್ಳುಕಂಟಿಯ ನಡುವೆ
ಅರಳಿದ ಚೆಂಗುಲಾಬಿ
ಸುಮಧುರ ಪರಿಮಳ ಬೀರದಿಲ್ಲ
ಆದರದೇ ಅಲ್ಲ
ಕೆಲವೊಮ್ಮೆ ವಿಧಿಯ ಮಸಲತ್ತು
ಬಹುಬಾರಿ ನಮ್ಮದೇ ನಡೆ ನುಡಿಯ ಕರಾಮತ್ತು !!
ಎಳೆಯ ಹೂಗಾಲುಗಳಿಗೆ
ಕಠಿಣ ಕಿರುಗೆಜ್ಜೆ
ಒರಟು ರಂಗ ಮಂಚದಲ್ಲಿ
ರಕ್ತ ಒಸರಿದರೂ ಬಿಡಲಾರದ ಹೆಜ್ಜೆ
ಹಾಕಲೇ ಬೇಕಲ್ಲ ಕಾಲ ರಿದಂನ ಹಿಂದೆ ಹಿಂದೆ
ಪರಿಣತ ಕಲಾವಿದೆಯಾದರೆ ನೀ ಪರಿಣೀತೆ
ಆಗ ಮಾತ್ರ ಎನಿಸುವೆ ವಿಜೇತೆ
ಕ್ರೂರ ಮೊಸಳೆಗಳ ಕಡಲಾಳದಲ್ಲಿ
ಹೊಳೆವ ನವರತ್ನ ಮುತ್ತು
ಆರಿಸಿಕೊಳ್ಳುವವನ ತಾಕತ್ತು !
ದುರ್ಗಮ ಹಾದಿಯಲ್ಲಿ ಸಾಹಸ ಯಾತ್ರೆ
ಜೇನುಗೂಡಿನ ಹೊದರಿನಲ್ಲಿ
ಮಧುಪಗಳ ದಾಳಿ
ಸಹಿಸು ಸಹಿಸು ಆಗ ಅಲ್ಲಿದೆ
ಮಾಧುರ್ಯದ ಮಧು ಪಾತ್ರೆ.

By : ವನರಾಗ ಶರ್ಮಾ 

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited