ಜೀವನ ವನದಲಿ ಅರಳಿದ ಸುಂದರ
ಕನಸಿನ ಮೊಗ್ಗು ಹೂವಾಗಿ.
ಮನಸಿನ ವಿಧ ವಿಧ ಅನುಭವ ಬಣ್ಣದ
ಪುಟಿ ಕಾರಂಜಿಯ ಸೆಲೆಯಾಗಿ.
ಕವನದ ರೂಪದಿ ಭಾವನೆ ಹೊಮ್ಮಿದೆ
ಮಕ್ಕಳ ಹರುಷದ ಹೊನಲಾಗಿ.
ಗಾಯನ ಗಂಗೆಯ ಹರಿಸುತ ಮೋಹಕ
ನೃತ್ಯದ ಭಂಗಿಯ ಝಲಕಾಗಿ...
ಬನ್ನಿರಿ ಮಕ್ಕಳೆ ಹಾಡನು ಹಾಡಿರಿ
ಸುಮಧುರ ರಂಜಿನಿ ರಾಗದಲಿ.
ಓದುವ ಬರೆಯುವ ಎಲ್ಲರ ನಾಲಿಗೆ
ನುಡಿಯಲಿ ಬಿಡುವಿನ ವೇಳೆಯಲಿ
ಅರಿವಿನ ಮಲ್ಲಿಗೆ ಚಪ್ಪರ ಸುತ್ತಲು
ಘಮ ಘಮ ಪರಿಮಳ ಬೀರುತಿದೆ.
ತುಸು ವಿಶ್ರಾಂತಿಗೆ ಬಳ್ಳಿಯ ಮಂಟಪ
ಕಲಿಕೆಯ ಶಾಲೆಯ ತೆರೆದ ಪೊದೆ.
ಓದಿದ ಪುಸ್ತಕ ಪ್ರೇಮಿಗಳೆಲ್ಲರು
ಮಕ್ಕಳ ಹಾಡಿನ ಬಂಡಿಯನು.
ಎಳೆವರು ನಾಡಿನ ನುಡಿ ಜಾತ್ರೆಯಲಿ
ಎಳೆದೊಲು ಕನ್ನಡ ರಥಗಳನು.
ಈ ಕಾರಂಜಿಯು ಚಿಂತನೆ- ನೀತಿ-
ಮಹಾತ್ಮ- ಪರಿಸರ- ಬಣ್ಣನೆಯ.
ಚಿನ್ನದ ಮಿಂಚನು ಫಳ ಫಳ ಹೊಳೆಯಿಸಿ
ತರುತಿದೆ ತರುತಿದೆ ಬಹು ಖುಷಿಯ.