BW News Bureau : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂನ್ 19 ರಂದು ಆಯುಷ್ ಇಲಾಖೆಯು ಈಶಾ ಫೌಂಡೇಶನ್ ಕೊಯಬಂತ್ತೂರು ಇವರ ಸಹಭಾಗಿತ್ವದಲ್ಲಿ “ಉಪ-ಯೋಗ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಅಂದು ಕಬ್ಬನ್ ಪಾರ್ಕ್ (ಸಿಟಿ ಸೆಂಟ್ರಲ್ ಲೈಬ್ರರಿಯಿಂದ ಹಡ್ಸನ್ ವೃತ್ತದವರೆಗೆ) ನಲ್ಲಿ ಬೆಳಿಗ್ಗೆ 7-30 ರಿಂದ 8-30 ಗಂಟೆಯವರೆಗೆ ನಡೆಯಲಿರುವ ಈ “ಉಪ-ಯೋಗ’ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಉದ್ಫಾಟಿಸಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಡಾ. ಶಾಲಿನಿ ರಜನೀಶ್, ಆಯುಕ್ತರಾದ ಪಿ. ಎಸ್. ವಸ್ತ್ರದ್ ಭಾಗವಹಿಸಲಿದ್ದಾರೆ.
“ಉಪ-ಯೋಗ” ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಲರಿ ಪ್ರದರ್ಶನ, ಸುಲಭ ವ್ಯಾಯಾಮಗಳು, ಪ್ರಾಣಾಯಾಮದ ಕುರಿತು ಡಿ.ವಿ.ಡಿ. ಮುಖಾಂತರ ತರಬೇತಿಯನ್ನು ನೀಡುವ ಜೊತೆಗೆ ಸುಮಾರು 2500 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ದಿನಾಚರಣೆಯ ಕುರಿತು ಜನಜಾಗೃತಿ ಮೂಡಿಸುವರು.
ಜೂನ್ 21 ರಂದು ಆಚರಿಸಲಾಗುತ್ತಿರುವ 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಂಠೀರವ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಜೊತೆಯಾಗಿ ಅರ್ಥಪೂರ್ಣವಾಗಿ ಆಚರಿಸಲು ಆಯುಷ್ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಸನ ಪ್ರದರ್ಶನ ನಡೆಸಲಿದ್ದು ಎಸ್-ವ್ಯಾಸ ಸಂಸ್ಥೆ ಮತ್ತು ಆರ್ಟ್ ಆಫ್ ಲೀವಿಂಗ್ ಅವರ ವತಿಯಿಂದ ಜನಸಾಮಾನ್ಯರಿಗೆ ಮಧುಮೇಹದ ತಪಾಸಣೆ, ಶಿಕ್ಷಕರಿಗೆ ನೆನಪಿನ ಶಕ್ತಿ, ಸೃಜನಶೀಲತೆ, ಶಾಲಾ ಮಕ್ಕಳಿಗೆ ಭಾವನಾತ್ಮಕ ಸಂಸ್ಕತಿ ಬಗ್ಗೆ ತಿಳುವಳಿಕೆ ಹಾಗೂ ಸಿ.ಡಿ.ಪಿ.ಒ. ಗಳಿಗೆ ಹ್ಯಾಪಿನೆಸ್ ಪ್ರೋಗ್ರಾಮ್ಗಳನ್ನು ನಡೆಸಲಾಗುತ್ತದೆ.