ಬೆಂಗಳೂರು : ಪುತ್ತೂರಿನ ಅನಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನೈಡ್ ಮೋಹನ್ ಕುಮಾರ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಜೀವನ ಪರ್ಯಂತ ಜೈಲುಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಮಳೀಮಠ್, ನ್ಯಾ ನ್ಯಾ ಜಾನ್ ಮೈಕೆಲ್ ಕುನ್ನಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸೈನೈಡ್ ಮೋಹನ್ ಸಮಾಜಕ್ಕೆ ಮಾರಕನಾಗಿದ್ದು, ಈತ ಮಹಿಳೆಯರ ಪಾಲಿಗೆ ಕಂಟಕನಾಗಿದ್ದಾನೆ. ಹೀಗಾಗಿ ಈತನನ್ನು ಸಾಯುವವರೆಗೂ ಜೈಲಿನಲ್ಲಿ ಇಡಬೇಕು. ಈತನಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು ಎಂದು ತೀರ್ಪು ನೀಡಿದೆ. ಈ ಮೂಲಕ ಅಧೀನ ನ್ಯಾಯಾಲಯ ನೀಡಿದ್ದ ಗಲ್ಲುಶಿಕ್ಷೆ ಆದೇಶವನ್ನು ಮಾರ್ಪಡಿಸಿ ಜೀವಾವಧಿ ಜೈಲುಶಿಕ್ಷೆಗೆ ಇಳಿಸಿ ತೀರ್ಪು ಪ್ರಕಟಿಸಿದೆ.
ಬಂಟ್ವಾಳದ ಅನಿತಾ ಎಂಬಾಕೆಯನ್ನು 2009 ರಲ್ಲಿ ಮದುವೆಯಾಗುವುದಾಗಿ ನಂಬಿಸಿ ಹಾಸನಕ್ಕೆ ಕರೆತಂದು ಆಕೆ ಮೇಲೆ ಮೋಹನ್ ಅತ್ಯಾಚಾರ ನಡೆಸಿದ್ದ, ನಂತರ ಆಕೆಯನ್ನು ಬಸ್ ನಿಲ್ದಾಣಕ್ಕೆ ಕರೆತಂದು, ಗರ್ಭಿಣಿ ಆಗುವುದನ್ನು ತಪ್ಪಿಸಲು ಆಕೆಗೆ ಮಾತ್ರೆ ನೀಡಿದ್ದ, ಆ ಮಾತ್ರೆ ಸೈನೈಡ್ ಲೇಪಿತವಾಗಿತ್ತು ಅದನ್ನು ಸೇವಿಸಿದ್ದ ಅನಿತಾ ಹಾಸನ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸಾವನ್ನಪ್ಪಿದ್ದಳು.
2003ರಿಂದ 2009ರವರೆಗೆ ಸೈನೆಡ್ ಮೋಹನ್ ಕುಮಾರ್ ಬರೋಬ್ಬರಿ 20 ಯುವತಿಯರನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಸೈನೆಡ್ ನೀಡಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ. ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2013ರ ಡಿಸೆಂಬರ್ 21ರಂದು ಗಲ್ಲುಶಿಕ್ಷೆ ವಿಧಿಸಿತ್ತು. ಬಂಟ್ವಾಳ ಸೇರಿದಂತೆ ಒಟ್ಟು 4 ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯಾಗಿತ್ತು. ಗಲ್ಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ.