ಬೆಂಗಳೂರು : ಪೆಟ್ರೋಲ್ ಬಂಕ್ ಮಾಲೀಕರ ಕಮಿಷನ್ ಮೊತ್ತವನ್ನು ಪರಿಷ್ಕರಿಸುವ ಕುರಿತ ನ್ಯಾಯಮೂರ್ತಿ ಅಪೂರ್ವಚಂದ್ರ ಸಮಿತಿಯ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ತೈಲ ಮಾರಾಟಗಾರರು ಇದೇ 13ರಂದು ಪೆಟ್ರೋಲ್ ಬಂಕ್ ಬಂದ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ರಾಜ್ಯದ 4,000 ಬಂಕ್ಗಳು ಸೇರಿ ದೇಶದ 54 ಸಾವಿರ ಬಂಕ್ಗಳು ಅ. 12ರ ರಾತ್ರಿ 12ರಿಂದ 13ರ ತಡರಾತ್ರಿವರೆಗೆ ಬಂದ್ ಆಗಲಿವೆ ಎಂದು ಅಖಿಲ ಕರ್ನಾಟಕ ಪೆಟ್ರೊಲಿಯಂ ವಿತರಕರ ಸಂಘದ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್ ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರಬೇಕು. ದೇಶದಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏಕರೂಪತೆ ತರಬೇಕು. ಇಂಧನ ಬೆಲೆ (ಪೆಟ್ರೋಲ್–ಡೀಸೆಲ್) ಪ್ರತಿನಿತ್ಯ ಪರಿಷ್ಕರಣೆ ಅವೈಜ್ಞಾನಿಕವಾಗಿದ್ದು, ಇದನ್ನು ರದ್ದು ಮಾಡಬೇಕು. ತೈಲ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಹೊಸ ನಿಯಮಾವಳಿಗಳಿಂದಾಗಿ ಡೀಲರ್ಗಳು ದಿನನಿತ್ಯ ಹಿಂಸೆ ಅನುಭವಿಸುವಂತಾಗಿದೆ. ತೈಲಬೆಲೆಯ ದೈನಂದಿನ ಪರಿಷ್ಕರಣೆಯೂ ಕೂಡ ಬಾಲಿಶತನದಿಂದ ಕೂಡಿದೆ. ಬಂಕ್ನಲ್ಲಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೂ ಅವಕಾಶ ನೀಡ ಬೇಕೆಂಬ ಆದೇಶ ಹೊರಡಿಸಿ ಒಂದು ವೇಳೆ ಸ್ವಚ್ಛತೆ ಕಾಪಾಡದಿದ್ದರೆ 2 ಲಕ್ಷ ರೂ.ದಂಡ ವಿಧಿಸುವ ನಿಯಮ ರೂಪಿಸಿದೆ. ಇಂತಹ ದಬ್ಟಾಳಿಕೆ ನೀತಿಯನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.