ನವದೆಹಲಿ : ದೇಶದಲ್ಲಿ ವೇಗದ ಬದಲಾವಣೆಯ ಅಗತ್ಯವಿದೆ. ದೇಶದಲ್ಲಿ ಬದಲಾವಣೆ, ಪರಿವರ್ತನೆಯಾಗಬೇಕೆಂದರೆ ಮೊದಲು ಆಡಳಿತದಲ್ಲಿ ಕ್ಷಿಪ್ರ ಪರಿವರ್ತನೆಯಾಗಬೇಕು, ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿಯಲ್ಲಿ ನೀತಿ ಆಯೋಗದ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಕ್ಷಿಪ್ರ ಬದಲಾವಣೆಯಾಗಬೇಕು. ಕ್ರಮೇಣ ಪರಿವರ್ತನೆಯಲ್ಲ ಎಂದರು. ದೇಶದಲ್ಲಿ ಬದಲಾವಣೆಯಾಗಬೇಕೆಂದರೆ ಮೊದಲು ಆಡಳಿತದಲ್ಲಿ ಬದಲಾವಣೆಯಾಯಾಗಬೇಕು, ಕಾನೂನಿನಲ್ಲಿ ಬದಲಾವಣೆಯಾಗಬೇಕು, ತಂತ್ರಜ್ನಾನವನ್ನು ಅಳವಡಿಕೆಯಲ್ಲಿ ಪ್ರಗತಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
19ನೇ ಶತಮಾನದ ಆಡಳಿತ ವ್ಯವಸ್ಥೆಗಳನ್ನು ಇಟ್ಟುಕೊಂಡು 21ನೇ ಶತಮಾನದಲ್ಲಿ ಪ್ರಗತಿ ಕಾಣಲು ಸಾಧ್ಯವಿಲ್ಲ, ಜನರ ಮನೋಭಾವನೆಯಲ್ಲಿ ರೂಪಾಂತರವಾಗದೆ ಆಡಳಿತದಲ್ಲಿ ರೂಪಾಂತರ ಸಾಧ್ಯವಿಲ್ಲ. ಪರಿವರ್ತಕ ಕಲ್ಪನೆಗಳಿಲ್ಲದೆ ಮನಸ್ಸು ರೂಪಾಂತರವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಆಡಳಿತದಲ್ಲಿ ರೂಪಾಂತರವಾಗಬೇಕೆಂದರೆ ಮೊದಲು ನಮ್ಮ ಆಲೋಚನೆಗಳಲ್ಲಿ, ಮನಸ್ಸಿನಲ್ಲಿ ಬದಲಾವಣೆಯಾಗಬೇಕು. ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವತ್ತ ನಮ್ಮ ಮನಸ್ಸಿನ ಕಿಟಕಿಗಳನ್ನು ತೆರೆದಿಡಬೇಕು, ಜಾಗತಿಕ ದೃಷ್ಟಿಕೋನಗಳು ಬೆಳೆಯಬೇಕು ಎಂದರು.
ದೇಶದಲ್ಲಿ ಇಂದಿನ ಯುವ ಜನಾಂಗ ವಿಭಿನ್ನ ರೀತಿಯಲ್ಲಿ ಹಾಗೂ ಮಹಾತ್ವಾಕಾಂಕ್ಷಿಯಾಗಿ ಆಲೋಚಿಸುತ್ತಿರುವಾದ ಸರ್ಕಾರ ಇನ್ನೂ ತನ್ನ ಹಳೆ ಸೂತ್ರಗಳಿಗೆ ಬೇರೂರಿಕೊಂಡಿರಲಾಗದು. ನಮ್ಮ ಆಲೋಚನೆಯ ಕಿಟಕಿಗಳನ್ನು ತೆರೆಯಬೇಕಿದೆ. ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಿದೆ ಎಂದು ಹೇಳಿದರು.