ಬೆಂಗಳೂರು : ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಡಾ.ಯತೀಂದ್ರ ಅವರ ಶಾಂತಲಾ ಇಂಡಸ್ಟ್ರೀಸ್ ಗೆ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಹಳೆಯ ದಾಖಲೆಗಳನ್ನೇ ಮತ್ತೆ ಈಗ ಬಿಡುಗಡೆಮಾಡುವ ಮೂಲಕ ಬಿಜೆಪಿ ನಾಯಕರು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಮಲ್ಲೇಶ್ವರಂ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಧಾನಪರಿಷತ್ ಸದಸ್ಯ ಬಿ.ಜೆ ಪುಟ್ಟಸ್ವಾಮಿ ಮತ್ತೆ ಹಳೆ ದಾಖಲೆ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದರು. ಡಾ.ಯತೀಂದ್ರ ಅವರ ಶಾಂತಲಾ ಇಂಡಸ್ಟ್ರೀಸ್ ಗೆ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿರುವ ಕುರಿತು ದಾಖಲೆಯನ್ನು ಬಿಡುಗಡೆಗೊಳಿಸಿದ್ದು, ಆದರೆ ಅದು ಕಳೆದ ಒಂದೂವರೆ ವರ್ಷದ ಹಳೆಯ ದಾಖಲೆ ಎಂಬುದು ಗಮನಕ್ಕೆ ಬರುತ್ತಿದ್ದಂತೆಯೇ ಪುಟ್ಟಸ್ವಾಮಿ ಕಂಗಾಲಾದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕೆಎಸ್ ಈಶ್ವರಪ್ಪ ಅವರು, ಹಳೇ ದಾಖಲೆ ಎಂದು ತಿಳಿಯುತ್ತಿದ್ದಂತೆಯೇ ಇದು ಹಳೆ ದಾಖಲೆಯೋ ಅಥವಾ ಹೊಸ ದಾಖಲೆಯೋ ಎಂಬುದು ಮುಖ್ಯವಲ್ಲ ಎಂದು ಸಮಜಾಯಿಷಿ ನೀಡಿರುವ ಘಟನೆ ನಡೆದಿದೆ.