ಬೆಂಗಳೂರು : ರಾಜ್ಯ ಸರ್ಕಾರದಿಂದ 8 ಗಣಿ ಗುತ್ತಿಗೆ ಕಂಪನಿಗಳ ಲೈಸನ್ಸ್ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಅಕ್ರಮವೆಸಗಿದ್ದು ಸತ್ಯ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದಂತೆ ಇದು ಕೂಡ ದೊಡ್ಡ ಹಗರಣವಾಗಿದೆ. ಕೇಸ್ ನಲ್ಲಿ ಸಿಎಂ ಅಕ್ರಮವೆಸಗಿರುವುದು ನಿಜ. ಇದರಲ್ಲಿ ಸಾವಿರಾರುಕೋಟಿ ಅವ್ಯವಹಾರ ನಡೆದಿದೆ ಎಂದರು.
ಜ.12ರಂದು ಕೇಂದ್ರ ಸರ್ಕಾರ ಆದೇಶ ನೀಡಿದ್ದು ಗೊತ್ತಿದ್ದರೂ ರಾಜ್ಯ ಸರ್ಕಾರ ಬಲ್ದೋಟಾ ಒಡೆತನದ ಎಂಎಸ್ ಪಿಎಲ್ ಪರ ಲಾಬಿ ನಡೆಸಿದ್ದಾರೆ. ಗುತ್ತಿಗೆ ನವೀಕರಣದ ಕಡತದಲ್ಲಿ ಕಾನೂನು ಬಾಹಿರವಾಗಿ ಹಿಂದಿನ ದಿನಾಂಕಗಳನ್ನು ಹಾಕಿ ತಿದ್ದಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರದಲ್ಲಿ ಬಲ್ದೋಟಾ ಒಡೆತನದ ಎಂ ಎಸ್ ಪಿಎಲ್ ಕಂಪನಿ ಪರ ಲಾಭಿಗೆ ಸಿಎಂ ನಿಂತಿದ್ದಾರೆ. ಲಾಬಿ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ. ಎಂ ಎಸ್ ಪಿ ಎಲ್ ಕಂಪನಿಗೆ 5೦೦ ಎಕರೆ ಭೂಮಿ ನೀಡಲು ಸಿಎಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಈ ಬಗೆಗಿನ ಸಂಪೂರ್ಣ ದಾಖಲೆ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.