ನವದೆಹಲಿ : ಕೇಂದ್ರ ಎನ್ ಡಿಎ ಸರ್ಕಾರದ ಬಹು ನಿರೀಕ್ಷಿತ ನೀತಿ ಆಯೋಗದ ಸಭೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ, ಜು.28ರಂದು ನಡೆಯಲಿದೆ.
ಮುಂದಿನ 15 ವರ್ಷಗಳಲ್ಲಿ ದೇಶದ ಅಭಿವೃದ್ಧಿ ಯೋಜನೆಗಳಿಗೆ ವೇಗ ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ವೇಳೆ ನೀತಿ ಆಯೋಗ ಸಿದ್ಧಪಡಿಸಿರುವ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಿ ಮೋದಿಯವರಿಗೆ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಲಿದೆ.
ನೀತಿ ಆಯೋಗದ ಆಡಳಿತ ಮಂಡಳಿ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಸಮೇತ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಸದಸ್ಯರಾಗಿದ್ದು, ಅಭಿವೃದ್ಧಿ ಯೋಜನೆಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ದೇಶಾಭಿವೃದ್ಧಿ ದೃಷ್ಟಿಕೋನದ ಗುರಿ, ಬಡತನ ನಿಮೂಲನೆ, ಮೂಲ ಸೌಕರ್ಯ, ಶಿಕ್ಷಣ, ವಾಣಿಜ್ಯ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಕೇಂದ್ರಿಕೃತವಾಗಿದೆ. 2014 ರಲ್ಲಿ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗ ಸ್ಥಾಪಿಸಿದ್ಧ ಪ್ರಧಾನಿ ಮೋದಿ ಜತೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ರಾಧಾ ಮೋಹನ್ ಸಿಂಗ್ 2017-18 ರಿಂದ 2023-24 ರವರೆಗಿನ ನೀತಿ ಆಯೋಗದ 7 ವರ್ಷಗಳ ಪ್ರತ್ಯೇಕ ಅಭಿವೃದ್ಧಿ ತಂತ್ರ ರೂಪಿಸಲಿದ್ದಾರೆ.
ಇದರ ಜತೆಗೆ 14 ನೇ ಹಣಕಾಸು ಆಯೋಗ ಅವಧಿಯಲ್ಲಿ ರಾಷ್ಟ್ರೀಯ ಅಭಿವೃದ್ದಿಗಾಗಿ 3 ವರ್ಷಗಳ ಕಾರ್ಯತಂತ್ರ ಹೆಣೆದಿರುವ ಮೋದಿ ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಿದ್ದಾರೆ. ನೀತಿ ಆಯೋಗದದಿಂದ ಮಾದರಿ ರಾಷ್ಟ್ರ ನಿರ್ಮಿಸುವ ಕನಸು ಹೊತ್ತಿರುವ ಮೋದಿ ಬುಧವಾರ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ದೃಷ್ಟಿಕೋನ ಮತ್ತು ಕಾರ್ಯವೈಖರಿ ಕುರಿತು ಚರ್ಚೆ ನಡೆಸಿದ್ದರು.