ಸಿಯಾಚಿನ್ : ರಕ್ಷಾ ಬಂಧನ ಹಿನ್ನಲೆಯಲ್ಲಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗೆ ತೆರಳಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಜಮ್ಮು-ಕಾಶ್ಮೀರದ ಸಿಯಾಚಿನ್ ಔಟ್ ಪೊಸ್ಟ್ ಗೆ ವಾಯು ಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ತೆರಳಿದ ಸ್ಮೃತಿ ಇರಾನಿ, ದೇಶದ ಗಡಿಯನ್ನು ಹಗಲಿರುಳು ಕಾಯುತ್ತಿರುವ ಸೇನಾ ಜವಾನರಿಗೆ ರಾಖೀಯನ್ನು ಕಟ್ಟಿದರು.
ಗಡಿ ಕಾಯುತ್ತಿದ್ದ ಸುಮಾರು 20 ಯೋಧರಿಗೆ ಕೇಂದ್ರ ಸಚಿವೆ ಇರಾನಿ, ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ಕೋರಿದರು. ಅಲ್ಲದೆ ಮನೆಯಲ್ಲಿ ತಯಾರಿಸಿಕೊಂಡು ಬಂದ ವಿಶೇಷ ಸಿಹಿ-ತಿಂಡಿಗಳನ್ನು ಸೈನಿಕರಿಗೆ ಹಂಚಿದರು.
ಈ ವೇಳೆ ಮಾತನಾಡಿದ ಸ್ಮೃತಿ ಇರಾನಿ, ದೇಶದ ಗಡಿ ಕಾಯುವ ನನ್ನ ಸಹೋದರರೊಂದಿಗೆ ರಕ್ಷಾ ಬಂಧನ ಆಚರಿಸಿದ್ದು ನನ್ನ ಭಾಗ್ಯ. ಇದೊಂದು ಅವಿಸ್ಮರಣಿಯ ಕ್ಷಣ. ಯೋಧರ ತ್ಯಾಗಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಹೇಳಿದರು. ಇದೇ ವೇಳೆ ಸೈನಿಕರ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಸಚಿವರು ಪ್ರಾರ್ಥಿಸಿದರು.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮಾನವ ಸಂಪನ್ಮೂಲ ಸಚಿವೆ ಉಮಾ ಭಾರತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಸಹ ಭಾರತದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಯೋಧರೊಂದಿಗೆ ರಕ್ಷಾ ಬಂಧನ ಆಚರಿಸುತ್ತಿದ್ದಾರೆ.