ಧಾರವಾಡ : ಸಿಯಾಚಿನ್ ಹಿಮದಡಿ 6 ದಿನಗಳ ಕಾಲ ಸಿಲುಕಿ, 3 ದಿನ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಗುರುವಾರ ಹುತಾತ್ಮರಾಗಿದ್ದ, ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಧಾರವಾಡದ ಕುಂದಗೋಳ ತಾಲೂಕಿನ ಸ್ವಗ್ರಾಮವಾದ ಬೆಟದೂರಿನ ಗ್ರಾ.ಪಂ. ಕಚೇರಿ ಆವರಣದಲ್ಲಿ ಕುಶಾಲತೋಪು ಹಾರಿಸಿ ಸಕಲ ಮಿಲಿಟರಿ ಹಾಗೂ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಸಂಪ್ರದಾಯದಂತೆ ನೆರವೇರಿಸಲಾಯಿತು.
ಶುಕ್ರವಾರ ಬೆಳಗ್ಗೆ ಬೆಟದೂರಿನ ಸರ್ಕಾರಿ ಶಾಲಾ ಆವರಣದಲ್ಲಿ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾರ್ವಜನಿಕರ ದರ್ಶನದ ಬಳಿಕ ಮಧ್ಯಾಹ್ನ 1.15ಕ್ಕೆ ಸಕಲ ಸರ್ಕಾರಿ ಗೌರವದೊಂದಿಗೆ ವೀರಶೈವ ಸಂಪ್ರದಾಯದ ವಿಧಿ, ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು, ಸೇನಾಧಿಕಾರಿಗಳು, ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಗ್ರಾಮಸ್ಥರು ನೆರದಿದ್ದರು.
ಹನುಮಂತಪ್ಪ ಅಮರ್ ರಹೇ, ಹುತಾತ್ಮ ಕೊಪ್ಪದ್ ಗೆ ಜೈ ಎಂದು ಘೋಷಣೆ ಕೂಗುವ ಮೂಲಕ ಗ್ರಾಮಸ್ಥರು ವೀರ ಯೋಧನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು. ಬೆಟದೂರಿನ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದರೆ, ಕೊಪ್ಪದ್ ಪತ್ನಿ ಸೇರಿದಂತೆ ಕುಟುಂಬಿಕರ ಗೋಳಾಟ ಮುಗಿಲು ಮುಟ್ಟಿತ್ತು.
ಹುತಾತ್ಮ ಯೋಧ ಕೊಪ್ಪದ್ ಪಾರ್ಥಿವ ಶರೀರ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದರೆ, ಮತ್ತೊಂದೆಡೆ ಪತಿ ಕೊಪ್ಪದ್ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಪತ್ನಿ ಮಹಾದೇವಿ ದು:ಖ, ನೋವು ತಡೆಯಲಾರದೆ ಕುಸಿದು ಬಿದ್ದ ಘಟನೆ ನಡೆದಿತ್ತು.
ಬೆಟದೂರು ಸರ್ಕಾರಿ ಶಾಲಾ ಆವರಣದಿಂದ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಸುವ ಸ್ಥಳಕ್ಕೆ ರವಾನಿಸಲಾಯಿತು. ಕೊಪ್ಪದ್ ಅಣ್ಣ ಗೋವಿಂದ್ ಕೊಪ್ಪದ್ ಅಂತಿಮ ವಿಧಿ ವಿಧಾನ ನೆರವೇರಿಸಿದರು. ನೀಲಗುಂದ ಮಠದ ಚನ್ನಬಸವ ಶ್ರೀಗಳಿಂದ ಪೂಜಾ ವಿಧಾನಕ್ಕೆ ಮಾರ್ಗದರ್ಶನ ನೀಡಿದರು.
ಜಗತ್ತಿನ ಅತಿ ಎಚ್ಚರದ ಯುದ್ಧಭೂಮಿಯಾದ ಸಿಯಾಚಿನ್ ಹಿಮದಡಿ ಆರು ದಿನ ಸಿಲುಕಿ, 3 ದಿನಗಳ ಕಾಲ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಸಾವಿನ ಜತೆ ಸೆಣಸಾಡಿ ಹುತಾತ್ಮರಾದ ಯೋಧ ಹನುಮಂತಪ್ಪ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಧೀರ ಯೋಧ, ಹುಟ್ಟೂರಿನ ಸಮರ ಸೇನಾನಿಗೆ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ಬಂದು ಅಂತಿಮ ನಮನ ಸಲ್ಲಿಸಿದರು.