Sullia : ಸುಳ್ಯದ ಬಸ್ ಡಿಪೋ ಶಂಕುಸ್ಥಾಪನೆಯ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈಯವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಇಲ್ಲಿನ ಶಿಕ್ಷಣ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಪರಿಸರಕ್ಕೆ ಪೂರಕವಾಗುವ ವಾತಾವರಣವನ್ನು ಉಳಿಸಿಕೊಂಡು ನೈಸರ್ಗಿಕ ಗಿಡ-ಮರಗಳ ಮಧ್ಯದಲ್ಲಿ ಶಿಕ್ಷಣ ನೀಡುತ್ತಿರುವುದು ಮಕ್ಕಳ ಭೌತಿಕ ಮತ್ತು ಬೌದ್ಧಿಕ ಶಕ್ತಿಯ ಬೆಳವಣಿಗೆಗೆ ಬಹಳ ಸಹಾಯವಾಗುತ್ತದೆ ಎಂಬುದಾಗಿ ಅರಣ್ಯ ಸಚಿವರ ರಮಾನಾಥ್ ರೈ ಸಂದರ್ಶಕರ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಬರಹದ ಮನೆ, ಕಲಾಶಾಲೆ, ಬಯಲು ರಂಗಮಂದಿರ ಹಾಗೂ ವೃತ್ತಾಕಾರದ ಕೊಠಡಿಗಳನ್ನು ಸಚಿವರು ವೀಕ್ಷಿಸಿದರು. ಸಂಸ್ಥೆಯ ಅಧ್ಯಕ್ಷ ಡಾ| ಚಂದ್ರಶೇಖರ ದಾಮ್ಲೆಯವರು ಕಲಿಕಾ ವ್ಯವಸ್ಥೆಗಳ ಬಗ್ಗೆ ಹಾಗೂ ಶಾಲಾ ಫಲಿತಾಂಶದ ಬಗ್ಗೆ ವಿವರಣೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಹಾಗೂ ಶಿಕ್ಷಕ ವೃಂದದವರು ಈ ವೇಳೆ ಉಪಸ್ಥಿತರಿದ್ದರು. ಸಚಿವರೊಂದಿಗೆ ಸ್ಥಳೀಯ ಮುಂದಾಳುಗಳಾದ ಸಂಶುದ್ದೀನ್, ಎಂ ವೆಂಕಪ್ಪ ಗೌಡ, ಮುಸ್ತಫಾ, ಪಿ ಎ ಮಹಮ್ಮದ್ ಜಯಪ್ರಕಾಶ್ ರೈ ಮುಂತಾದವರಿದ್ದರು.