ನವದೆಹಲಿ : ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಸ್ಪಷ್ಟ ದೃಷ್ಟಿಕೋನ, ಪ್ರಗತಿಪರ, ಸಕಾರಾತ್ಮಕ ಮತ್ತು ಅಭಿವೃದ್ಧಿಶೀಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆಯ ನಂತರ ಪ್ರತಿಕ್ರಿಯೆ ನೀಡಿರುವ ಅವರು, ಯುವಕರು, ರೈತರು, ಬಡವರು, ಮಧ್ಯಮ ವರ್ಗ, ಸಾಮಾನ್ಯ ನಾಗರಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಗೆ ಬಜೆಟ್ ನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದರು.
ಈ ಬಜೆಟ್ ಹೂಡಿಕೆದಾರರ ಪರವಾಗಿದ್ದು, ತೆರಿಗೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನು ನಿವಾರಿಸಿದೆ. ಕಾಲಮಿತಿಯ ಹೂಡಿಕೆದಾರರ ಪರವಾದ ತೆರಿಗೆ ಪದ್ಧತಿ ರೂಪಿಸುವ ಭರವಸೆಗಳನ್ನು ಬಜೆಟ್ ನಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಎಲ್ಲರಿಗೂ ಮನೆ, ಉದ್ಯೋಗ, ಆರೋಗ್ಯ, ಶಿಕ್ಷಣ, ಸಂಪೂರ್ಣ ವಿದ್ಯುದೀಕರಣ ಗುರಿ ನಿಗದಿಪಡಿಸಿ 2022ರ ಸ್ವತಂತ್ರ ಅಮೃತಮಹೋತ್ಸವಕ್ಕೆ ಇದನ್ನು ಸಾಧಿಸುವ ಸಂಕಲ್ಪ ಮಾಡಲಾಗಿದೆ ಎಂದು ಶ್ಲಾಘಿಸಿದರು.
ರಾಜ್ಯಗಳ ಹಾಗೂ ದೇಶದ ಜನರ ನಿರೀಕ್ಷೆಗಳನ್ನು ಈಡೇರಿಸುವ ಬಜೆಟ್ ಮಂಡಿಸಿದ್ದಕ್ಕಾಗಿ ಅರುಣ್ ಜೇಟ್ಲಿಯವರನ್ನು ಅಭಿನಂದಿಸುವುದಾಗಿ ಹೇಳಿದ ಪ್ರಧಾನಿ ಮೋದಿ, ಬಡಜನರ ಘನತೆಯ ಜೀವನಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸಲಾಗಿದೆ. ವಿದೇಶದಲ್ಲಿರುವ ಪ್ರತಿ ಪೈಸೆ ಕಪ್ಪು ಹಣವನ್ನು ಭಾರತಕ್ಕೆ ತರುವ ನಮ್ಮ ಸಂಕಲ್ಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದಕ್ಕಾಗಿ ವಿಶೇಷ ಕಾನೂನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.