ನವದೆಹಲಿ : ಸೆಪ್ಟೆಂಬರ್ 5 ಶಿಕ್ಷಕ್ಷಕರ ದಿನಾಚರಣೆ ದಿನದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶಿಕ್ಷಕರಾಗಿ ದೆಹಲಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡಲಿದ್ದಾರೆ.
ರಾಷ್ಟ್ರಪತಿಯವರಿಂದ ಪಾಠ ಹೇಳಿಸುವ ಈ ಯೋಜನೆ ಆರಂಭವಾದದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ-ಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಅವರ ಶಿಕ್ಷಕರಿಗಾಗಿ ಎಂಬ ಕಾರ್ಯಕ್ರಮದ ಅಡಿಯಲ್ಲಿ.
ಈಗಾಗಲೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಶಿಕ್ಷಕರಾಗಿ ಪಾಠ ಹೇಳಿಕೊಡಲು ತಮಗೆ ನೀಡಿದ ಆಹ್ವಾನವನ್ನು ಒಪ್ಪಿದ್ದಾರೆ. ಕಳೆದ ಬಾರಿಯು ಶಿಕ್ಷಕರ ದಿನದಂದು ರಾಷ್ಟ್ರಪತಿ ಮುಖರ್ಜಿ, ರಾಷ್ಟ್ರಪತಿ ಭವನದ ಆವರಣದಲ್ಲಿರುವ ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದರು.
ಶಿಕ್ಷಕರಾಗಿ ಎಂಬ ಕಾರ್ಯಕ್ರಮದಡಿ ಕಲೆ, ಸಂಸ್ಕೃತಿ, ಕ್ರೀಡೆ, ರಾಜಕೀಯ ಹಾಗೂ ಉದ್ಯಮ ಮೊದಲಾದ ರಂಗಗಳ ಸಾಧಕರನ್ನು ಶಿಕ್ಷಕರಾಗಿ ಆಹ್ವಾನಿಸಲಾಗುತ್ತದೆ. 1969ರಲ್ಲಿ ಪ್ರಣಬ್ ಮುಖರ್ಜಿ ರಾಜಕೀಯಕ್ಕೆ ಬರುವ ಮೊದಲು ಶಿಕ್ಷಕರಾಗಿ, ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು.