ಪುರಾಣದಲ್ಲಿ ಗಣಪತಿಗೆ ಆನೆಯ ತಲೆ ಜೋಡಿಸಿದ ಕಥೆ, ದಕ್ಷನಿಗೆ ಮೇಕೆಯ ತಲೆ ಜೋಡಿಸಿದ ಕಥೆಗಳನ್ನು ಕೇಳಿದ್ದೀರಿ. ಅಷ್ಟೇ ಅಲ್ಲ ನಮ್ಮಲ್ಲಿ ಹೃದಯ ಕಸಿ, ಕಿಡ್ನಿ ಕಸಿ ಸಾಮಾನ್ಯವೇ ಆಗಿ ಹೋಗಿದೆ. ಆದರೆ ಪುರಾಣದಲ್ಲಿ ಕೇಳಿದ ಕಥೆ ಮುಂದೊಂದು ದಿನ ನಡೆಯಲಿದೆ ಅಂದರೆ, ಹುಬ್ಬೇರುವುದು ಸಹಜ.
ಹೌದು. ಪ್ರಕೃತಿಗೇ ಸವಾಲಾಗುವಂತಹ ತಲೆ ಕಸಿ ಚಿಕಿತ್ಸೆಗೆ ವೈದ್ಯಲೋಕ ಸಿದ್ಧವಾಗುತ್ತಿದ್ದು, 2017ರಲ್ಲಿ ಇದು ಸಾಧ್ಯವಾಗಲಿದೆ ಎಂದು ಇಟಲಿಯ ಶಸ್ತ್ರಚಿಕಿತ್ಸಕರೊಬ್ಬರು ಹೇಳಿದ್ದಾರೆ.
ಇಟಲಿಯ ಟ್ಯುರಿನ್ ಅಡ್ವಾನ್ಸ್ಡ್ ನ್ಯೂರೋಮಾಡ್ಯುಲೇಷನ್ ಸಂಸ್ಥೆಯ ಸೆರ್ಜಿಯೋ ಕ್ಯಾನ್ ವೆರೋ ಅವರು ಈ ಶಸ್ತ್ರಚಿಕಿತ್ಸೆಯ ಸಾಧ್ಯತೆಯನ್ನು 2013ರಲ್ಲಿ ಹೇಳಿದ್ದು, ಅದರ ತಾಂತ್ರಿಕತೆಗಳನ್ನು ವಿವರಿಸಿದ್ದರು. ಅದರಂತೆ ವೈದ್ಯರು ಮಾನವನ ಶಿರವನ್ನು ಬೇರೆಯದೇ ಆದ ದೇಹಕ್ಕೆ ಜೋಡಿಸಲು ಸಾಧ್ಯವಿದೆ ಎಂದು ಹೇಳಿದ್ದರು.
ಇದರ ತಾಂತ್ರಿಕತೆ ಬಗ್ಗೆ ಜರ್ನಲ್ ಸರ್ಜಿಕಲ್ ನ್ಯೂರಾಲಜಿ ಇಂಟರ್ ನ್ಯಾಷನಲ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಅದರಂತೆ ದಾನಿಯ ಶಿರವನ್ನು ಅತ್ಯಂತ ಶೀತಲೀಕರಣ ಘಟಕದಲ್ಲಿಟ್ಟು ಆಮ್ಲಜನಕ ನೆರವಿಲ್ಲದೇ ಸಂರಕ್ಷಿಸಲು ಸಾಧ್ಯವಿದೆ ಎಂದು ಹೇಳಲಾಗಿದೆ. ಬಳಿಕ ಶಿರವನ್ನು ವ್ಯಕ್ತಿಯೊಬ್ಬರ ದೇಹಕ್ಕೆ ಅಳವಡಿಸಿ ಬೆನ್ನಹುರಿಯನ್ನು ಜೋಡಿಸುವುದರೊಂದಿಗೆ ತಲೆಯಿಂದ ದೇಹಕ್ಕೆ ಹೋಗುವ ನರಗಳನ್ನು ವಿಶಿಷ್ಟ ಶಸ್ತ್ರಕ್ರಿಯಾ ವಿಧಾನದ ಮೂಲಕ ಜೋಡಿಸಲು ಸಾಧ್ಯವಿದೆ ಎನ್ನಲಾಗಿದೆ. ಆದರೆ ಇದನ್ನು ಸಾಧಿಸಲು ಪೊಲಿಥೈಲೆನ್ ಗೈಕೊಲ್ ಎಂಬ ರಾಸಾಯನಿಕವನ್ನು ಜೋಡಿಸುವ ಭಾಗದಲ್ಲಿ ಬಳಸಬೇಕು. ಜೋಡಣೆ ಪೂರ್ಣವಾಗುವಲ್ಲಿವರೆಗೆ ಆ ಸ್ಥಿತಿ ಕಾಪಾಡಲು ನಿರಂತರ ಚುಚ್ಚುಮದ್ದುಗಳನ್ನು ರೋಗಿಯ ದೇಹಕ್ಕೆ ನೀಡುತ್ತಲೇ ಇರಬೇಕಾಗುತ್ತದೆ.
ಅಲ್ಲದೇ ಶಿರ ಜೋಡಣೆ ಬಳಿಕ ರಕ್ತ ಪರಿಚಲನೆ, ಮಾಂಸ ಖಂಡಗಳು ಎಂದಿನಂತಾಗಲು ನಾಲ್ಕುವಾರ ಕಾಲಾವಕಾಶ ಬೇಕಾಗುತ್ತದೆ. ಈ ಸಂದರ್ಭ ವ್ಯಕ್ತಿಯನ್ನು ತುರ್ತು ನಿಗಾಘಟಕದಲ್ಲೇ ಇಡಬೇಕಾಗುತ್ತದೆ. ಬೆನ್ನಹುರಿ ಜೋಡಣೆ ಅತ್ಯಂತ ಸವಾಲಿನ ಕೆಲಸವಾಗಿದ್ದು, ಸುಮಾರು ಐದು ವಾರಗಳ ಬಳಿಕವಷ್ಟೇ ಅದರ ಫಲಿತಾಂಶ ತಿಳಿಯಲಿದೆ ಎಂದು ನಿಯತಕಾಲಿಕೆ ಲೇಖನ ಹೇಳಿದೆ.