2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ ಪಾಲಕ್ಕಾಡ್ ನಿವಾಸಿಯಾದ 19 ವರ್ಷದ ಶ್ರದ್ಧಾ ಪ್ರಸಾದ್ ಸೇರಿದಂತೆ ಮೂವರು ಭಾರತೀಯರಿಗೆ ಈ ಭಾಗ್ಯ ಒಲಿದು ಬಂದಿದೆ.
ಹಾಲೆಂಡ್ ಸಂಸ್ಥೆಯೊಂದು ಮಾರ್ಸ್ ಒನ್ ಫಾರ್ ಮಿಷನ್ ಒನ್ ವೇ ಟ್ರಿಪ್ (ಒಂದು ಬಾರಿ ಹೋಗುವುದು ಮಾತ್ರ. ಅಲ್ಲಿಂದ ವಾಪಸ್ ಇಲ್ಲ) ಎಂಬ ಯೋಜನೆಯ ಅಂಗವಾಗಿ 4 ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸುತ್ತಿದೆ. ಈ ಯೋಜನೆಯ ಮೂರನೇ ಹಂತದಲ್ಲಿ 100 ಜನರ ಪಟ್ಟಿಯಲ್ಲಿ ಶ್ರದ್ಧಾ ಹೆಸರು ಆಯ್ಕೆ ಆಗಿದೆ.
ಪಾಲಕ್ಕಾಡ್ ನಿವಾಸಿಯಾದ ಶ್ರದ್ಧಾ ಕೊಯಂಬತ್ತೂರ್ ಅಮೃತಾ ವಿಶ್ವವಿದ್ಯಾಪೀಠದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಶ್ರದ್ಧಾ ಜತೆಗೆ ತರಣ್ ಜಿತ್ ಸಿಂಗ್ ಭಾಟಿಯಾ (29), ರಿತಿಕಾ ಸಿಂಗ್ (29) ಎಂಬಿಬ್ಬರೂ ಈ ಪಟ್ಟಿಯಲ್ಲಿದ್ದಾರೆ.
ತರಣ್ಜಿತ್ ಯುನಿವರ್ಸಿಎಟಿ ಆಫ್ ಸೆಂಟ್ರಲ್ ಫ್ಲೋರಿಡಾದಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಅದೇ ವೇಳೆ ರಿತಿಕಾ ದುಬೈ ನಿವಾಸಿಯಾಗಿದ್ದಾರೆ. 660 ಜನರ ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಆದಾಗ್ಯೂ, ಮೂರನೇ ಪಟ್ಟಿಯಲ್ಲಿ ಮೂರು ಭಾರತೀಯರ ಹೆಸರು ಮಾತ್ರ ಇದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶ್ರದ್ಧಾ ಪ್ರಸಾದ್, ಮಂಗಳ ಗ್ರಹಕ್ಕೆ ತೆರಳುವ 24 ಮಂದಿ ತಂಡದಲ್ಲಿ ಆಯ್ಕೆಯಾಗುವ ವಿಶ್ವಾಸ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಮೂರನೇ ಸುತ್ತಿನಲ್ಲಿ ನಾನು ಯಶಸ್ಸು ಕಂಡಾಗಲೇ ನನ್ನ ವಿಶ್ವಾಸ ದೃಢವಾಗಿತ್ತು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ. ಆದರೆ ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಬಿಚ್ಚಿಡಲ್ಲ ಎಂದು ತಿಳಿಸಿದ್ದಾರೆ.
ನನ್ನ ತಂದೆ, ತಾಯಿ, ಗೆಳೆಯರು ಮತ್ತು ನನ್ನೆಲ್ಲಾ ಹತ್ತಿರದ, ಆತ್ಮೀಯರನ್ನು ಬಿಟ್ಟು ಹೋಗುವುದು ತುಂಬಾ ಕಷ್ಟದಾಯಕವಾಗಿದೆ. ಇದು ತುಂಬಾ ಸಲೀಸಾದುದಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಇದು ಜೀವಮಾನದಲ್ಲಿನ ಏಕೈಕ ಅವಕಾಶ ಎಂಬುದನ್ನು ನಾನು ಮರೆಯುವುದಿಲ್ಲ ಎಂದು ಹೇಳುತ್ತಾಳೆ.
ನೀವು ನಿಮ್ಮ ತಂದೆ ತಾಯಿಗೆ ಒಬ್ಬಳೇ ಮಗಳು, ಆದರೂ ನೀವು ಮಂಗಳ ಗ್ರಹದಲ್ಲಿ ಕಾಯಂ ಆಗಿ ನೆಲೆಸುವ ಬಗ್ಗೆ ನಿಮ್ಮ ತಂದೆ ತಾಯಿಯ ದೃಷ್ಟಿಕೋನ ಹೇಗಿದೆ ಎಂಬ ಪ್ರಶ್ನೆಗೆ, ಅವರ ಮನಸ್ಸಿಗೆ ನನ್ನದು ಹುಚ್ಚುತನ ಅಂತ ಇದ್ದಿರಬಹುದು. ಅವರು ನನ್ನ ಬಗ್ಗೆ ದೃಢ ನಿಲುವು ತಳೆಯುತ್ತಾರೆ. ಹಾಗಾಗಿ ಅವರು ಅಚ್ಚರಿಗೊಳ್ಳುವುದಿಲ್ಲ ಎಂಬುದು ಶ್ರದ್ಧಾ ಅಭಿಮತ.
ಈ ಯಾತ್ರೆಗಾಗಿ 2,02,586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 100 ಜನರ ಪಟ್ಟಿ ತಯಾರಿಸಲಾಗಿತ್ತು. 50 ಗಂಡಸರು ಮತ್ತು 50 ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಯುಎಸ್39, ಯುರೋಪ್ 31, ಏಷ್ಯಾ 16, ಆಫ್ರಿಕಾ -07 ಹಾಗೂ ಒಷೇನಿಯಾದಿಂದ 7 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಹಂತದಲ್ಲಿ ನಾಲ್ಕು ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಸಂಸ್ಥೆ ತೀರ್ಮಾನಿಸಿದೆ. ಆಮೇಲೆ ಅಲ್ಲಿ ಮನುಷ್ಯರ ಕಾಲನಿ ನಿರ್ಮಿಸುವ ಸಲುವಾಗಿ 40 ಜನರನ್ನು ಕಳುಹಿಸಲಾಗುವುದು. 2024ರಲ್ಲಿ ನಡೆಯಲಿರುವ ಈ ಯಾತ್ರೆಯ ಕೊನೆಯ ಸುತ್ತಿನಲ್ಲಿ ಆಯ್ಕೆಯಾದವರಿಗೆ 7 ವರ್ಷಗಳ ಕಾಲ ತರಬೇತಿ ನೀಡಲಾಗುವುದು.