.
ತಲೆಬರಹ ನೋಡಿ ಹುಬ್ಬೇರಿಸಬೇಡಿ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಬೆನ್ನಲ್ಲೇ ಮಣಿಪುರದ ಗ್ರಾಮದ ಹೆಸರೂ ಬದಲಾಗಿದೆಯಂತೆ. ಗ್ರಾಮಸ್ಥರು ಗ್ರಾಮದ ಹೆಸರನ್ನು “ಮೋದಿ’’ ಎಂದು ಬದಲಾಯಿಸಿ “ಅಚ್ಚೇ ದಿನ್’’ಗೆ ಅಡಿಪಾಯ ಹಾಕಿದ್ದಾರಂತೆ!
ಅರೆ ಇದೇನಿದು ಮತ್ತೆ ಪ್ರಶ್ನಾರ್ಥಕ ದೃಷ್ಟಿಯಲ್ಲಿ ನೋಡಬೇಡಿ. ಉತ್ತರ ಭಾರತದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿ ನಿಜಕ್ಕೂ ಆಸಕ್ತಿದಾಯಕ ಹಾಗೂ ಕುತೂಹಲವನ್ನು ಕೆರಳಿಸಿತ್ತು.
ಅದು ಮಣಿಪುರದ ಚಾಂದೆಲ್ ಜಿಲ್ಲೆಯ ಬೆಟ್ಟ ಪ್ರದೇಶದ ಒಂದು ಪುಟ್ಟ ಗ್ರಾಮ. ಶತಮಾನಗಳಿಂದ ಬುಡಕಟ್ಟು ಜನರೇ ಹೆಚ್ಚಾಗಿರುವ ಗ್ರಾಮ. ಕಳೆದ ವರ್ಷ ದೇಶಾದ್ಯಂತ ಮೋದಿ ಅಲೆ ಜೋರಾಗಿ ಬೀಸತೊಡಗಿದಾಗ ಈ ಪುಟ್ಟ ಗ್ರಾಮದ ಮುಖಂಡ ಗ್ರಾಮದ ಹೆಸರನ್ನೇ “ಮೋದಿ’’ ಎಂದು ಬದಲಾಯಿಸಿ ಬಿಟ್ಟ. ಈ ನಡುವೆ ಇಂಫಾಲ್ ನ ಕಣಿವೆ ಕೇಂದ್ರಿತವಾದ ಮಣಿಪುರ ಸರ್ಕಾರ ಬೆಟ್ಟ ಪ್ರದೇಶಗಳನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟಿತು. “ಮೋದಿ’’ ಗ್ರಾಮಕ್ಕೆ ಕೆಟ್ಟ ದಿನಗಳ ಬಿಸಿ ಮುಟ್ಟಿತು. ಕಳೆದ ತಿಂಗಳು ನರೇಂದ್ರ ಮೋದಿ ನಮ್ಮ ದೇಶದ ಪ್ರಧಾನಿಯಾದರು. ಏತನ್ಮಧ್ಯೆ ಹದಗೆಟ್ಟ ಗ್ರಾಮದ ಪರಿಸ್ಥಿತಿ ಸುಧಾರಿಸಬೇಕಾದರೆ ಮೂಲಸೌಕರ್ಯ ಬೇಕು ಎಂಬ ನಿರ್ಧಾರಕ್ಕೆ ಬಂದರು ಗ್ರಾಮಸ್ಥರು. ನೆರೆ ಗ್ರಾಮಸ್ಥರು, ಅರೆಸೇನಾಪಡೆ ಸಿಬ್ಬಂದಿ ಜತೆಗೂಡಿ 22 ಕಿ.ಮೀ. ರಸ್ತೆ ದುರಸ್ತಿ ಕೈಗೊಂಡರು. ಉತ್ತಮ ರಸ್ತೆ ಇದೀಗ ಪೂರ್ಣಗೊಂಡಿದೆ. ಹತ್ತಿರದ ಪಟ್ಟಣ ಪಾಲ್ಲೆಲ್ ಗೆ ಸಂಪರ್ಕವೂ ಸಿಕ್ಕಿದೆ.
ಗ್ರಾಮಸ್ಥರು ಹೀಗೇಕೆ ಮಾಡಿದರು? ಎಂದು ಕುತೂಹಲದಿಂದ ಗಮನಿಸಿದರೆ, ಚಾಂದೆಲ್ ನಾಗಾ ಪೀಪಲ್ಸ್ ಆರ್ಗನೈಸೇಷನ್ ಅಧ್ಯಕ್ಷ ಕರ್ನಲ್ ಅನಲ್ ಮಾಧ್ಯಮಗಳಿಗೆ ತಿಳಿಸಿದಿಷ್ಟು- “ರಸ್ತೆ ದುರಸ್ಥಿ ಮಾಡುವಂತೆ ಸರ್ಕಾರದ ಗಮನಸೆಳೆದರೂ ವರ್ಷಗಳಿಂದ ಗಮನಹರಿಸಿರಲಿಲ್ಲ. ಈಗ ಪ್ರಧಾನಿಯವರ ಗಮನಸೆಳೆಯುವುದಕ್ಕಾಗಿ ಗ್ರಾಮದ ಹೆಸರನ್ನು ಮೋದಿ ಎಂದು ಬದಲಾಯಿಸಿದ್ದಲ್ಲದೇ ತಾವೇ ಸ್ವತಃ 60 ಗ್ರಾಮಸ್ಥರೊಡಗೂಡಿ ರಸ್ತೆ ದುರಸ್ಥಿ ಮಾಡಿದ್ದಾರೆ.
ಮನಸಿದ್ದರೆ ಮಾರ್ಗ ಎಂಬುದನ್ನು ಗ್ರಾಮಸ್ಥರು ಮಾಡಿ ತೋರಿಸಿದ್ದು ಇತರೆ ಗ್ರಾಮಗಳಿಗೆ ಮಾದರಿಯಾದರು. ಈಗ ನೀವೇ ಹೇಳಿ… “ಅಚ್ಚೇ ದಿನ್’’ ನಿಮ್ ಕೈಯಲ್ಲೇ ಇದೆಯಲ್ಲ?