ಮಂಜುಳಾ ಮುನವಳ್ಳಿ
ಇಲ್ಲೊಬ್ಬ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಇದ್ದಾರೆ ಎಂದರೆ ಖಂಡಿತಾ ಅದು ತಪ್ಪಾಗಲಾರದು. ಹೌದು. ಇವರು ಮಂಜುಳಾ ಮುನವಳ್ಳಿ. ಅ.10ರಂದು ಸ್ವಿಡ್ಜರ್ಲೆಂಡ್ ನ ಜಿನೆವಾದಲ್ಲಿ ನಡೆಯಲಿರುವ 66ನೇ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಧಾರವಾಡ ಜಿಲ್ಲೆಯ ರಾಮಾಪುರದ ಮಂಜುಳಾ ಮುನವಳ್ಳಿ ಜಿನೆವಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಭಾರತದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ವರದಿ ಮಂಡಿಸಲಿದ್ದಾರೆ.
ಧಾರವಾಡ ಜಿಲ್ಲೆಯಿಂದ 15ಕಿ.ಮೀ ದೂರದಲ್ಲಿರುವ ರಾಮಾಪುರ 2000 ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಗ್ರಾಮ. ಇಲ್ಲಿನ ರೈತ ಕುಟುಂಬದ ಮಹಾಂತೇಶ ಹಾಗೂ ಮಹಾದೇವಿ ಅವರ ಮಗಳೇ ಮಂಜುಳಾ. ಈಕೆ ಧಾರವಾಡದ ಆರ್.ಎಲ್.ಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಅಲ್ಲದೇ ಕಿಡ್ಸ್ ಸಂಸ್ಥೆಯ ಗುಬ್ಬಚ್ಚಿ ಮಕ್ಕಳ ಮಹಾ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಜುಳಾ ಮಂಡಿಸಲಿರುವ ಮಕ್ಕಳ ಹಕ್ಕುಳ ವರದಿಯನ್ನು ಕರ್ನಾಟಕ, ಆಂಧ್ರಪ್ರದೇಶ್, ಮಹಾರಾಷ್ತ್ರ, ಗುಜರಾತ್, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಕೇರಳ ರಾಜ್ಯಗಳ 26 ಮಕ್ಕಳು ತಯಾರಿಸಿದ್ದಾರೆ. ವರದಿ ಮಂಡಿಸಲು ಭಾರತದಿಂದ ಕರ್ನಾಟಕದ ಮಂಜುಳಾ ಮುನವಳ್ಳಿ ಹಾಗೂ ಗುಜರಾತ್ ನ ಅಫ್ಸಾನಾ ನೋಯಿಡಾ ಆಯ್ಕೆಯಾಗಿದ್ದು, ಇಬ್ಬರೂ ಅ.6ರಂದು ಜಿನೆವಾಕ್ಕೆ ತೆರಳಲಿದ್ದಾರೆ.
ದೇಶದ ಮಕ್ಕಳ ಪ್ರತಿನಿಧಿಯಾಗಿ ಅವರ ಹಕ್ಕುಗಳ ಮಂಡನೆಗಾಗಿ ಆಯ್ಕೆಗೊಂಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಮಂಜುಳಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
' Children's alternative report to united nations committe on the rights of the child' ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಮಕ್ಕಳ ಬಗೆಗಿನ ತಾರತಮ್ಯ, ನಾಗರಿಕ ಹಕ್ಕು, ಸ್ವಾತಂತ್ರ್ಯ ಅನಾಥ ಮಕ್ಕಳಿಗೆ ಕುಟುಂಬದ ವಾತಾವರಣ ನಿರ್ಮಾಣ, ಶಿಕ್ಷಣದ ಹಕ್ಕು, ಆರೋಗ್ಯ ಹೀಗೆ ವಿವಿಧ ಹಕ್ಕುಗಳ ಬಗ್ಗೆ ಮಾಹಿತಿಗಳನ್ನು ಉಲ್ಲೇಖಿಸಲ್ಪಟ್ಟಿದೆ. ಭಾರತದ ಕಾನೂನಿನಲ್ಲಿ ಮಕ್ಕಳ ಹಕ್ಕುಗಳ ಬಗೆಗಿನ ಗೊಂದಲ ಹಾಗೂ ಕೆಲ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಕುರಿತಾಗಿಯೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.