.
ಚುನಾವಣಾ ಫಲಿತಾಂಶ ಪ್ರಕಟಾಗಿದೆ. ನೀತಿ ಸಂಹಿತೆಯ ಲಗಾಮೂ ಇನ್ನಿಲ್ಲ. ಬಿಜೆಪಿಗೆ ಸ್ಪಷ್ಟ ಜನಾದೇಶವೂ ಲಭಿಸಿದೆ. ಅಚ್ಛೇ ದಿನ್ ಆನೇವಾಲಾ ಹೈ ಎಂದು ಘೋಷಿಸಿದ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರಲು ದಿನಗಣನೆ ಆರಂಭವಾಗಿದೆ. ಅವರು ಹೇಳಿದ ಅಚ್ಛೇ ದಿನ್ ಬರುವ ಮೊದಲು ಜನ ಸಾಮಾನ್ಯರು ಕೊಂಚ ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕಾಗಬಹುದೇನೋ?
ಈಗಾಗಲೇ ಬೆಲೆ ಏರಿಕೆ ಬಿಸಿ ಇನ್ನಿಲ್ಲದಂತೆ ಜನ ಸಾಮಾನ್ಯರನ್ನು ಸುಡತೊಡಗಿದೆ. ಇದರ ಜತೆಗೆ ವಿದ್ಯುತ್ ದರ, ಬಸ್ ಪ್ರಯಾಣ ದರ ಏರಿಕೆಯೂ ನಗರಗಳಲ್ಲಿ ಬದುಕು ದುಸ್ತರ ಎಂಬಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಹಿಂದಿನ ಸರ್ಕಾರದ ಹಲವು ಕ್ರಮಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಕೂಡಾ ಜನರನ್ನು ಬಾಧಿಸಿದೆ. ಈ ವಿಷಯವಾಗಿ ನೂತನ ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ಕ್ರಮಗಳೇನು ಎಂಬುದೀಗ ಸದ್ಯದ ಕುತೂಹಲ.
ಜನ ಸಾಮಾನ್ಯರ ಸಂಚಾರದ ರೈಲ್ವೆ ಕೂಡಾ ಪ್ರಯಾಣದರವನನು 14.2 ಶೇಕಡ ಹಾಗೂ ಸರಕು ಸಾಗಣೆ ದರವನ್ನು 6.5 ಶೇಕಡ ಹೆಚ್ಚಿಸಲು ತೀರ್ಮಾನ ತೆಗೆದುಕೊಂಡಿದೆ. ಆದರೆ ಅನುಷ್ಠಾನದ ಹೊಣೆ ಈಗ ಬಿಜೆಪಿ ಸರ್ಕಾರದ ಪಾಲಿಗೆ ಬಿಟ್ಟು ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ನಿರಾಳರಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ನರೇಂದ್ರ ಮೋದಿ ಸರ್ಕಾರ ಮೊದಲ ವರ್ಷದ ಆಡಳಿತಾವಧಿಯಲ್ಲಿ ಕೆಲವು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದು ಅದರ ನೇರ ಪರಿಣಾಮ ಶ್ರೀ ಸಾಮಾನ್ಯನ ಮೇಲೇ ಆಗಲಿದೆ. ಆದರೂ ಅಂಥ ನಿರ್ಣಯಗಳಿಂದ ಅವರು ಹಿಂದೆ ಸರಿಯುವ ಲಕ್ಷಣಗಳಿಲ್ಲ.
ಹಣಕಾಸು ನೀತಿ ಮತ್ತು ಇತರೆ ವಿಷಯಗಳ ಬಗ್ಗೆ ಬಿಜೆಪಿ ಸರ್ಕಾರ ಮಂಡಿಸುವ ಮೊದಲ ಬಜೆಟ್ ಸ್ಪಷ್ಟ ಚಿತ್ರಣ ನೀಡಲಿದೆ. ಶ್ರೀ ಸಾಮಾನ್ಯರಿಗೆ ಒಂದೆಡೆ ಹೊಡೆತ ಬಿದ್ದರೂ, ಅನೇಕ ಲಾಭಗಳಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬುದು ಸದ್ಯದ ವಿಶ್ಲೇಷಣೆ.