ಸಾಂದರ್ಭಿಕ ಚಿತ್ರ
ಚುನಾವಣೆ ನಡೆಯಿತೆಂದರೆ ಹಣದ ಹೊಳೆ ಹರಿಯಿತೆಂದೇ ಲೆಕ್ಕ. ಅದು ಲೆಕ್ಕವಷ್ಟೇ ಅಲ್ಲ ವಾಡಿಕೆಯ ಮಾತು ಕೂಡಾ. ಬಹುತೇಕ ಇಂತಹ ಮಾತುಗಳು ಋಣಾತ್ಮಕವಾಗಿರುತ್ತದೆ. ಆದರೆ, ಚುನಾವಣೆಯಿಂದಾಗಿ ದೇಶದ ನಿವ್ವಳ ದೇಶೀಯ ಉತ್ಪನ್ನ(ಜಿಡಿಪಿ) ಹೆಚ್ಚಾಗುತ್ತದೆ ಎಂಬುದು ಧನಾತ್ಮಕ ಅಂಶ. ಇದನ್ನು ಕೈಗಾರಿಕಾ ಒಕ್ಕೂಟ ಅಸೋಚಾಮ್ ಅಂಕಿ ಅಂಶ ಸಹಿತ ವಿವರಿಸಿದೆ.
ಲೋಕಸಭೆಯ 543 ಸ್ಥಾನಗಳು ಮತ್ತು ತೆಲಂಗಾಣ, ಸೀಮಾಂಧ್ರ, ಒಡಿಶಾ ವಿಧಾನಸಭಾ ಚುನಾವಣೆಯ ಖರ್ಚುವೆಚ್ಚದಿಂದಾಗಿ ಭಾರತದ ನಿವ್ವಳ ದೇಶೀಯ ಉತ್ಪನ್ನಕ್ಕೆ 60000 ಕೋಟಿ ರೂಪಾಯಿ ಸೇರ್ಪಡೆಯಾಗಲಿದೆ. ಚುನಾವಣಾ ಖರ್ಚು ವೆಚ್ಚ ಅಂದರೆ, ಅಭ್ಯರ್ಥಿಗಳು ಅಧಿಕೃತವಾಗಿ ಪ್ರಚಾರಕ್ಕೆ ಮಾಡುವ ಗರಿಷ್ಠ 70 ಲಕ್ಷ ರೂಪಾಯಿ ಖರ್ಚು ಮತ್ತು ಅನಧಿಕೃತವಾಗಿ ನಡೆಸುವ ವೆಚ್ಚ, ಚುನಾವಣಾ ನಿರ್ವಹಣೆಗೆ ಸರ್ಕಾರ ಮತ್ತು ಚುನಾವಣಾ ಆಯೋಗ ಮಾಡುವ ವೆಚ್ಚಗಳೂ ಸೇರುತ್ತವೆ.
ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 2-3 ಸ್ಪರ್ಧಿಗಳ ನಡುವೆ ಪ್ರಬಲ ಸ್ಪರ್ಧೆ ನಡೆಯಲಿದ್ದು, ಪ್ರತಿ ಅಭ್ಯರ್ಥಿ ಕೂಡಾ ಚುನಾವಣಾ ಆಯೋಗ ನಿಗದಿ ಪಡಿಸಿದ ಗರಿಷ್ಠ ಚುನಾವಣಾ ವೆಚ್ಚಕ್ಕೆ ಹೊರತಾಗಿ 5-7 ಕೋಟಿ ರೂ. ವ್ಯಯಿಸಲಿದ್ದಾರೆ. ಬಹುತೇಕ ಪ್ರತಿ ಕ್ಷೇತ್ರದಲ್ಲೂ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ಹಣಾಹಣಿ ನಡೆಯುವುದಂತೂ ಖಚಿತ. ಇದರಂತೆ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 20-25 ಕೋಟಿ ರೂಪಾಯಿ ವೆಚ್ಚವಾಗಲಿದೆ. ಒಟ್ಟಾರೆ ಈ ವೆಚ್ಚ ಅಂದಾಜು 20ಸಾವಿರ ಕೋಟಿ ರೂಪಾಯಿ ಆಗಬಹುದೆಂಬುದು ಅಸೋಚಾಮ್ ಲೆಕ್ಕಾಚಾರ.
ಸರ್ಕಾರ ಮತ್ತು ಅಭ್ಯರ್ಥಿಗಳು ವ್ಯಯಿಸುವ ಹಣ ಮಾಧ್ಯಮಗಳಲ್ಲಿ ಜಾಹೀರಾತು, ಮುದ್ರಣ, ಅಂತರ್ಜಾಲ, ಸಾರಿಗೆ, ಅಡುಗೆ, ವಿಮಾನ ಯಾನ ಸಂಸ್ಥೆಗಳಿಗೆ ನೇರ ವರಮಾನವಾಗಲಿದೆ. ಇವರು ಈ ಗಳಿಕೆಯ ಹಣದಲ್ಲಿ 80-90% ಹಣವನ್ನು ಗ್ರಾಹಕೋಪಯೋಗಿ ವಸ್ತುಗಳ ಖರೀದಿಗೇ ವ್ಯಯಿಸಲಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಅಭ್ಯರ್ಥಿಗಳು ಒಟ್ಟಾರೆ 20ಸಾವಿರ ಕೋಟಿ ಖರ್ಚು ಮಾಡಿದರೂ, ಅದು ದೇಶದ ನಿವ್ವಳ ಉತ್ಪಾದನೆ ಮೇಲೆ ಮೂರು ಪಟ್ಟು ಅಂದರೆ 60ಸಾವಿರ ಕೋಟಿ ರೂ.ಗಳಷ್ಟು ಧನಾತ್ಮಕ ಪರಿಣಾಮ ಬೀರಲಿದೆ ಎಂಬುದು ಅಸೋಚಾಮ್ ಲೆಕ್ಕಾಚಾರ.