.
ಅಕ್ಷಯ ತೃತೀಯ ಬಂತೆಂದರೆ ಸಾಕು ಅದೇನೋ ಸಂಭ್ರಮ ಸಡಗರ. ಚಿನ್ನದ ಹಬ್ಬ ಎಂದರೂ ತಪ್ಪಾಗಲಾರದು. ಚಿನ್ನದ ಬೆಲೆ ಎಷ್ಟಾದರೇನು ಅಂದು ಚಿನ್ನ ಕೊಂಡರೆ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿಂದ ಜನ ಚಿನ್ನ ಖರೀದಿಗೆ ಮುಗಿಬೀಳುತ್ತಾರೆ. ಅದರಲ್ಲೂ ಈ ಬಾರಿ ಶುಕ್ರವಾರ(ಮೇ2) ಅಕ್ಷಯ ತೃತೀಯ ಬಂದಿರುವುದು ಇನ್ನಷ್ಟು ವಿಶೇಷ. ಶುಕ್ರವಾರ ದೇವಿಯ ವಾರ ಎಂಬ ನಂಬಿಕೆಯೂ ಸೇರಿದ್ದು, ಚಿನ್ನ ಖರೀದಿ, ಮಾರಾಟ ವಹಿವಾಟು ಭರದಿಂದ ಸಾಗಿದೆ.
ಬೆಂಗಳೂರಿನ ಚಿನ್ನಾಭರಣ ಮಳಿಗೆಗಳು ಕಳೆದೊಂದು ವಾರದಿಂದ ತುಂಬಿ ತುಳುಕುತ್ತಿದ್ದು, ಶುಕ್ರವಾರವಂತೂ ಕೆಲವೊಂದು ಮಳಿಗೆಗೊಳಗೆ ಕಾಲಿರಿಸುವುದಕ್ಕೂ ಜಾಗವಿಲ್ಲದ ಪರಿಸ್ಥಿತಿ. ಇಂತಹ ಪರಿಸ್ಥಿತಿಯನ್ನು ಊಹಿಸಿಕೊಂಡ ವ್ಯಾಪಾರಿಗಳು ವಾರಕ್ಕೂ ಮೊದಲೇ ಬುಕ್ಕಿಂಗ್ ಆರಂಭಿಸಿ, ಶುಕ್ರವಾರ ಅದನ್ನು ಕೊಡುವ ಭರವಸೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳು ದಿನಕ್ಕೊಂದು ಆಫರ್ ನೀಡುತ್ತಿವೆ. ಕೆಲವು ಕಡೆ ರಿಯಾಯಿತಿ ದರದಲ್ಲಿ ಚಿನ್ನ ನೀಡಿದರೆ, ಇನ್ನು ಕೆಲವು ಕಡೆ ವೇಸ್ಟೇಜ್ ಕಡಿತಗೊಳಿಸುವುದಿಲ್ಲವೆಂದು ಘೋಷಿಸಿದ್ದರು. 1000 ಕ್ಕೂ ಹೆಚ್ಚು ವಿನ್ಯಾಸಗಳ ಆಭರಣಗಳನ್ನು ಪ್ರದರ್ಶಿಸಲಾಗುತ್ತಿದೆ. ಇನ್ನು ಆಭರಣ ಖರೀದಿ ಮಾಡಿದ ಬಳಿಕ ಇಷ್ಟವಾಗದೇ ಹೋದರೆ ಅದನ್ನು ಎಕ್ಸ್ ಚೇಂಜ್ ಮಾಡುವುದಕ್ಕೆ 5 ದಿನದ ಕಾಲಾವಕಾಶ ಕೂಡಾ ನೀಡಿವೆ. ಇದಲ್ಲದೆ, ಕೆಲವೆಡೆ, ನಿಗದಿತ ಮೌಲ್ಯದ ಚಿನ್ನಾಭರಣ ಖರೀದಿ ಮಾಡಿದರೆ ಉಚಿತವಾಗಿ ಬೆಳ್ಳಿ, ಬಂಗಾರದ ನಾಣ್ಯಗಳನ್ನೂ ನೀಡುತ್ತಿದ್ದಾರೆ.
ಸಾಯಿ ಗೋಲ್ಡ್ ಪ್ಯಾಲೇಸ್ ಹೊಸ ಯೋಜನೆ ಘೋಷಿಸಿದ್ದು ಬೆಂಗಳೂರು ದಕ್ಷಿಣ ಕ್ಷೇತ್ರದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಕುಟುಂಬಕ್ಕೆ ಬಂಗಾರದ ನಾಣ್ಯ ಕೊಡುವುದಾಗಿ ಹೇಳಿದೆ. ಆನ್ ಲೈನ್ ಮೂಲಕವೂ ಚಿನ್ನಾಭರಣ ಖರೀದಿ ಭಾರಿ ಜೋರಾಗಿ ನಡೆದಿದೆ.
ಬೆಲೆ ಏರಿಲ್ಲ: ಕಳೆದ ಮೂರು ವರ್ಷಗಳ ಚಿನ್ನದ ದರ ಗಮನಿಸಿದರೆ ಈ ವರ್ಷ ಚಿನ್ನದ ದರ ಇಳಿಕೆಯಾಗಿದೆ. 2012ರಲ್ಲಿ ಇದೇ ಅವಧಿಯಲ್ಲಿ ಚಿನ್ನ 10 ಗ್ರಾಂಗೆ 32 ಸಾವಿರ ರೂ. 2013ರಲ್ಲಿ 33 ಸಾವಿರ ರೂ. ಆಗಿತ್ತು. ಆದರೆ, ಈ ವರ್ಷ 29630 ರೂ.ದರ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಈ ಬಾರಿ ಚಿನ್ನದ ಹಬ್ಬದ ದಿನ 1450 ಕಿಲೋ ಚಿನ್ನದ ವಹಿವಾಟು ನಡೆಯುವ ನಿರೀಕ್ಷೆ ಪೇಟೆಯಲ್ಲಿದೆ.