.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಇಲ್ಲದ ಚಿಂತೆ ಪಕ್ಷದ ಕಾರ್ಯಕರ್ತರನ್ನು ಆವರಿಸಿದೆಯಂತೆ. ಅದೇನು ಅಂತೀರಾ? ಮುಂದೆ ಓದಿ..
ಹೇಳಿ ಕೇಳಿ ಈಗ ಲೋಕಸಭಾ ಚುನಾವಣೆ ಕಾವು ತಾರಕಕ್ಕೇರಿದೆ. ಕಾಂಗ್ರೆಸ್ ಪಕ್ಷವನ್ನು ಮೂರನೇ ಬಾರಿ ಅಧಿಕ್ಕಾರಕ್ಕೆ ತರಲು ರಾಹುಲ್ ಗಾಂಧಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಸದಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಾಹುಲ್ ಗಾಂಧಿ ಎಲ್ಲೇ ಸಂವಾದಕ್ಕೆ ಹೋದರೂ ಅವರ ವಿವಾಹದ ಕುರಿತು ಒಂದು ಪ್ರಶ್ನೆ ಗ್ಯಾರೆಂಟಿ.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಒಬ್ಬರ ಕಥೆ-ವ್ಯಥೆ ಬಹಿರಂಗವಾಗತೊಡಗಿದೆ. ಸಹಜವಾಗಿಯೇ ಅವಿವಾಹಿತರಾಗಿರುವ ರಾಹುಲ್ ಗಾಂಧಿಯ ಖಾಸಗಿ ಜೀವನದ ಬಗ್ಗೆ ಕೂಡಾ ಪ್ರಶ್ನೆಗಳೇಳತೊಡಗಿವೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಅವರು, ನನಗೆ ಹೊಂದುವ ಹುಡುಗಿ ಸಿಕ್ಕಿದ ಕೂಡಲೇ ವಿವಾಹವಾಗುವುದಾಗಿ ಹೇಳಿದ್ದು ವರದಿಯಾಗಿತ್ತು. ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲೂ ಈ ಪ್ರಶ್ನೆ ಎದುರಾಗಿತ್ತು. ಆವಾಗೆಲ್ಲ ಅವರು ನಗುತ್ತಾ ಉತ್ತರ ಹೇಳಿದ್ದರು. ಆದರೆ ಸೋಮವಾರ ಅವರಿಗೆ ಮುಜುಗರ ಆಗುವಂಥ ಸನ್ನಿವೇಶ ಉತ್ತರಪ್ರದೇಶದ ಅಲಹಾಬಾದಿನಲ್ಲಾಗಿತ್ತು.
ಅವರು ಅಲಹಾಬಾದಿನ ಕಾಲೇಜು ಮೈದಾನಕ್ಕೆ ಆಗಮಿಸಿ, ಪ್ರಚಾರ ಭಾಷಣ ಆರಂಭಿಸಿದ್ದರು. ಯುಪಿಎ ಸರ್ಕಾರದ ಯೋಜನೆಗಳನ್ನು ಒಂದೊಂದಾಗಿ ವಿವರಿಸುತ್ತಾ ವಿಪಕ್ಷಗಳ ನಾಯಕರು ಅದನ್ನು ಅಡ್ಡಿ ಉಂಟುಮಾಡಿದ್ದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನದಲ್ಲಿದ್ದರು. ಇದ್ದಕ್ಕಿದ್ದಂತೆ ಅಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರ ನಡುವಿನಿಂದ, "ಆಪ್ ದೇಶ್ ಕೋ ಕಬ್ ಭಾಭಿ ದೋಗೆ'' ಎಂಬೊಂದು ಪ್ರಶ್ನೆ ತೂರಿ ಬಂತು.
ಅಚಾನಕ್ ಆಗಿ ಕೇಳಿ ಬಂದ ಪ್ರಶ್ನೆಯಿಂದಾಗಿ ರಾಹುಲ್ ತಡಬಡಾಯಿಸಿದರು. ಅದಕ್ಕೆ ಉತ್ತರಿಸದೇ ಭಾಷಣ ಮುಂದುವರಿಸುವಂತಿರಲಿಲ್ಲ. ಹೀಗಾಗಿ ಒಂದು ಕ್ಷಣ ವಿಚಲಿತರಾದಂತೆ ಕಂಡು ಬಂದ ರಾಹುಲ್ ಬಳಿಕ, "ಅಭಿ ಔರ್ ರುಕೋ ಭಾಯ್'' ಎಂದು ವಿಷಯಾಂತರ ಮಾಡಿ ಭಾಷಣ ಮುಂದುವರಿಸಿದರು. ಅಂತೂ ಎನ್.ಡಿ.ತಿವಾರಿ, ದಿಗ್ವಿಜಯ್ ಸಿಂಗ್ ಮೊದಲಾದ ಹಿರಿಯ ಕಾಂಗ್ರೆಸಿಗರ ಪ್ರಕರಣದ ಬಳಿಕ ರಾಹುಲ್ ವಿಷಯದಲ್ಲಿ ಕಾರ್ಯಕರ್ತರಿಗೂ ಚಿಂತೆ ಆವರಿಸಿದೆ ಎಂಬುದಂತೂ ಸ್ಪಷ್ಟ ಎನ್ನುತ್ತಿದ್ದಾರಂತೆ ರಾಜಕೀಯ ವಿರೋಧಿಗಳು..