ಇನ್ನೇನು ಶಾಲೆಗಳಲ್ಲಿ ಆರ್.ಟಿ.ಇ(ಶಿಕ್ಷಣ ಹಕ್ಕು ಕಾಯ್ದೆ) ಪ್ರಕ್ರಿಯೆ ಪ್ರಾರಭವಾಗಿದೆ. ಆದರೆ ಆರ್.ಟಿ.ಇ ಮೀಸಲು ಸೀಟುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಗೆ ಖಾಸಗಿ ಶಾಲೆಗಳು ಯಾವುದೆ ರೀತಿಯ ಕಿಮ್ಮತ್ತು ನೀಡುತ್ತಿಲ್ಲ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿನ ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸುತ್ತಿವೆ. ಆರ್.ಟಿ.ಇ ಸೀಟುಗಳ ಪ್ರವೇಶ ಪ್ರಕ್ರಿಯೆ ಅವಧಿಯಲ್ಲಿ ಪ್ರತಿ ದಿನ ಬಂದ ಅರ್ಜಿಗಳೆಷ್ಟು, ಬಾಕಿ ಉಲಿದಿರುವ ಅರ್ಜಿಗಳೆಷ್ಟು, ಇನ್ನೆಶ್ಟು ಸೀಟುಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಗಳನ್ನು ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ಅಂಟಿಸಬೇಕು. ಅದು ಬೆಳಿಗ್ಗೆ 10.30ರೊಳಗೆ ಪ್ರಕಟಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದರೆ ಯಾವುದೇ ಶಾಲೆಗಳಲ್ಲಿ ಈ ವರೆಗೆ ಯಾವುದೇ ನೋಟಿಸ್ ಕೂಡ ಕಣ್ಣಿಗೆ ಬೀಳುತ್ತಿಲ್ಲ.
ಬಹುತೇಕ ಖಾಸಗಿ ಶಾಲೆಗಳಲ್ಲಿಯೂ ಇದೇ ದೃಶ್ಯ ಸಾಮಾನ್ಯ. ಆರ್.ಟಿ.ಇ ಅಡಿ ಲಭ್ಯವಿರುವ ಶೇ.25ರಷ್ಟು ಮೀಸಲಾತಿ ಸೀಟನ್ನು ಇನ್ನೂ ಪ್ರಕಟಿಸಿಲ್ಲ. ಯಾರೊಬ್ಬರೂ ಪೋಷಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಕೆಲ ಶಾಲೆಗಳು ಅರ್ಜಿ ಖಾಲಿಯಾಗಿವೆ ಎಂದರೆ ಮತ್ತೆ ಕೆಲ ಶಾಲೆಗಳು ಆರ್.ಟಿ.ಇ ಸೀಟುಗಳು ಭರ್ತಿಯಾಗಿಹೋಗಿವೆ ಎಂಬ ಸಬೂಬು ನೀಡುತ್ತಿವೆ.
ಆರ್.ಟಿ.ಇ ಅಧೀನದ ಯಾವುದೆ ಶಾಲೆ ಉಚಿತ ಮೀಸಲು ಸೀಟುಗಳ ಪ್ರವೇಶ ನಿರಾಕರಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುತ್ತದೆ. ಇನ್ನು ಸ್ಥಿತಿವಂತರು ಸುಳ್ಳು ಪ್ರಮಾಣಪತ್ರ ನೀಡಿ ಆರ್.ಟಿ.ಇ ಸೀಟು ದುರ್ಬಳಕೆ ಮಾಡಿಕೊಳ್ಳುತ್ತಿರುವುದುದನ್ನು ಗಮನಿಸಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಆರ್.ಟಿ.ಇ ಸೀಟಿನಲ್ಲಿ ಆಧ್ಯತೆ ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಆರ್.ಟಿ.ಇ ಸೀಟು ಸಂಪೂರ್ಣ ಉಚಿತವಾಗಿದ್ದು, ಸರ್ಕರವೇ ಈ ಸೀಟುಗಳ ಶುಲ್ಕ ಭರಿಸುತ್ತದೆ. ಅರ್ಜಿಗಳು ಬಿಇಒ ಕಛೇರಿಯಲ್ಲಿ ಇಲಾಖೆಯ ವೆಬ್ ಸೈಟ್ ನಲ್ಲಿಯೂ ಅರ್ಜಿ ದೊರೆಯುತ್ತದೆ. ಇನ್ನು ಸೀಟು ಭರ್ತಿಯಾಗಿದೆ ಎಂದು ಹೇಳುವ ಶಾಲೆಗಳ ವಿರುದ್ಧ ಬಿಇಒಗಳಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಇಷ್ಟಾಗ್ಯೂ ಖಾಸಗಿ ಶಾಲೆಗಳು ಯಾವುದೇ ಆದೇಶಕ್ಕೂ ಬೆಲೆಕೊಡದೆ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ನಡೆದುಕೊಳ್ಳುತ್ತಿವೆ. ಬಡ ಪೋಷಕರ ಸ್ಥಿತಿ ಮಾತ್ರ ಇಲ್ಲಿ ಹೈರಾಣಾಗಿದೆ.