ಚಿಣ್ಣರ ಅಂಗಳವಾಯಿತು, ಈಗ ವಿಶೇಷ ಅಧಿಕಾರಿ ನೇಮಕ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಚಿಣ್ಣರ ಅಂಗಳ ಎಂಬ ಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿತ್ತು. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿದೆಯೋ ಗೊತ್ತಿಲ್ಲ ಈಗ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ವಿಶೇಷ ಅಧಿಕಾರಿಗಳನ್ನು ಶಿಕ್ಷಣ ಇಲಾಖೆ ನೇಮಕ ಮಾಡಿದೆ.
ಹೌದು, ಶಾಲೆಯಿಂದ ಹೊರಗುಳಿಯುವ ಮಕ್ಕಳ ಮೇಲೆ ನಿಗಾವಹಿಸಲು ಹಾಜರಾತಿ ಅಧಿಕಾರಿಗಳನ್ನು ನೇಮಕಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಯೋಜಕರನ್ನು ಹಾಜರಾತಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿದ ಮಕ್ಕಳನ್ನು ಶೂನ್ಯಸಂಖ್ಯೆಗೆ ಇಳಿಸುವುದೇ ಇವರ ಜವಾಬ್ದಾರಿ.
ಈ ಹಿನ್ನಲೆಯಲ್ಲಿ ಎಲ್ಲಾ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಶಾಲೆ ಬಿಡದಂತೆ ಎಚ್ಚರವಹಿಸ ಬೇಕು. ತಮ್ಮ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ವಾಸಿಸುವ ಮಕ್ಕಳ ಗಣತಿ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಪೊಷಕರಿಗೆ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸಬೇಕು ಎಂದು ಇಲಾಖೆ ಸೂಚಿಸಿದೆ.
ಅಲ್ಲದೇ ಅರ್ಹ ವಯಸ್ಸಿನ ಮಕ್ಕಳ ಮಾಹಿತಿಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಮಕ್ಕಳು ಮುಖ್ಯಶಿಕ್ಷಕರ ಅನುಮತಿ ಇಲ್ಲದೇ 7 ದಿನಕ್ಕಿಂತ ಹೆಚ್ಚು ದಿನ ಶಾಲೆಘೆ ಗೈರುಹಾಜರಾದರೆ ಪೋಷಕರನ್ನು ಸಂಪರ್ಕಿಸಿ ತಿಳುವಳಿಕೆ ನೀಡಿ ವಾಪಸ್ ಕರೆತರಬೇಕು. ಜೊತೆಗೆ ಹಾಜರಾತಿ ಅಧಿಕಾರಿಗಳಿಗೆ ಮಾಹಿತಿ ನೀಡಬೆಕು.
ಒಂದು ವೇಳೆ ಅಗತ್ಯ ಬಿದ್ದರೆ ಹಾಜರಾತಿ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಡಯಟ್, ಸ್ಥಳೀಯ ಪರಿಣತ ಸ್ವಯಂ ಸೇವಾ ಸಂಸ್ಥೆ ಸಹಕಾರದೊಂದಿಗೆ ಪೊಷಕರು ಹಾಗೂ ಮಗುವಿಗೆ ಶಿಕ್ಷಣದ ಮಹತ್ವದ ಬಗ್ಗೆ ಕೌನ್ಸೆಲಿಂಗ್ ನಡೆಸಬೆಕು. ಆದಾಗ್ಯೂ ಒಂದುವೇಳೆ ಆಗಲೂ ಮಗು ಶಾಲೆಗೆ ಗೈರಾದರೆ ಪೋಷಕರಿಗೆ ನೋಟಿಸ್ ನೀಡಬೇಕು.
ಆದರೂ ಪ್ರಯೋಜನವಾಗದಿದ್ದಲ್ಲಿ ಪೋಷಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಬಹುದು. ಈ ಎಲ್ಲಾ ಕ್ರಮಗಳನ್ನು ಹಾಜರಾತಿ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರದಿಸಿದ್ದಾರೆ.
ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಹಲವು ಹೊಸ ಹೊಸ ಯೋಜನೆ ಜಾರಿಗೆ ತಂದು, ಸರ್ಕಸ್ ಮಾಡುವ ಬದಲು ಜಾರಿಯಲ್ಲಿರುವ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ, ಆಗಿಲ್ಲವೆಂದರೆ ಹೇಗೆ ಯಶಸ್ವಿಗೊಳಿಸಬೇಕು, ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನವೇನು ಎಂಬುದನ್ನು ಚರ್ಚಿಸಿ ಆ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಒಳಿತು.