Untitled Document
Sign Up | Login    
ವೈವಿಧ್ಯಮಯ ಜನಪದ ಶಿಲ್ಪಕಲೆ

ಲೋಹದ ಕುದುರೆ

ಲೋಹದ ಕುದುರೆ

ಆದಿಮ ಸ್ಥಿತಿಯಲ್ಲಿ ಕಾಡಿನಲ್ಲಿಯೇ ವಾಸವಾಗಿದ್ದ ಮಾನವ ತನ್ನ ಉದರ ಪೋಷಣೆಗೆ ಹಣ್ಣು-ಹಂಪಲು, ಗಡ್ಡೆ-ಗೆಣಸು ಮತ್ತು ಬೇಟೆಗೆ ದೊರೆತ ಪ್ರಾಣಿಗಳನ್ನು ಅವಲಂಬಿಸಿಕೊಂಡಿದ್ದಾಗ, ಕಲ್ಲು ಅವನ ಪ್ರಮುಖ ಆಯುಧವಾಗಿತ್ತು. ಪೃಕೃತಿಯ ಶಿಶುವಾಗಿ ಅದರ ಮಡಿಲಲ್ಲಿಯೇ ಬೆಳೆದರೂ ಮಿಂಚು, ಗುಡುಗು, ಸಿಡಿಲು, ಕಾಡ್ಗಿಚ್ಚು, ಭೂಕಂಪ, ನೆರೆ-ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳು ಅವನನ್ನು ತಲ್ಲಣಗೊಳಿಸುತ್ತಿದ್ದವು. ಇದರಿಂದ ನಿಸರ್ಗವನ್ನು ಕುರಿತಂತೆ ಭಯ-ಭಕ್ತಿ ಎರಡೂ ಅವನಲ್ಲಿ ಬೆಳೆದುಬಂದವು. ಅಂತೆಯೇ ಪ್ರಕೃತಿಯನ್ನು ನಾನಾ ರೀತಿಯಲ್ಲಿ ಆರಾಧಿಸತೊಡಗಿದನು.

ಅಲೆಮಾರಿಯಾಗಿದ್ದ ಮಾನವ, ಒಂದೆಡೆ ನೆಲೆ ನಿಂತು ಕೃಷಿ ಜೀವನವನ್ನು ಪ್ರಾರಂಭಿಸಿದಾಗ ಆಹಾರ ನೀಡುವ ಭೂಮಿ ತಾಯಿ ಅವನಿಗೆ ದೈವವಾಯಿತು; ಅದರಂತೆ ಕೃಷಿ ಕೆಲಸಕ್ಕೆ ಸಹಾಯಕವಾದ ಎತ್ತು ದೈವವಾಯಿತು. ಇಷ್ಟೇ ಅಲ್ಲ; ಹಿರಿಯರು ಸತ್ತಾಗ ಭಯದಿಂದ ಸಾಂಕೇತಿಕ ರೂಪದಲ್ಲಿ ಆ ಹಿರಿಯರ ಪೂಜೆ ಮಾಡತೊಡಗಿದನು. ಮೊದಲು ಒರಟುಕಲ್ಲು, ಮರದ ತುಂಡು, ಮಣ್ಣಿನ ಗುಪ್ಪೆ, ಹುತ್ತ, ಸಗಣಿಯ ಮುದ್ದೆಗಳನ್ನು ಪೂಜಿಸಿದ ಮಾನವ ಕ್ರಮೇಣ ಅವಕ್ಕೆಲ್ಲ ಒಂದು ಕಲಾತ್ಮಕ ರೂಪ ಕೊಡತೊಡಗಿದ. ಇದೇ ಜನಪದ ಮೂರ್ತಿಶಿಲ್ಪ ಕಲೆಗೆ ತಳಹದಿಯಾಯಿತು. ಈ ಕಲಾ ಪ್ರೇರಣೆಯೇ ಜೀವನದಲ್ಲಿ ಬಳಸುವ ಅಗತ್ಯ ವಸ್ತು ವಿಶೇಷಗಳಲ್ಲಿಯೂ ಕಲಾತ್ಮಕತೆಯನ್ನು ರೂಪಿಸುವ ಪ್ರಯತ್ನವನ್ನು ಮಾಡಿತು.

ಚಂದನದ ಗೊಂಬೆ

ಜನಪದ ಶಿಲ್ಪಕಲೆಯ ಉಗಮ-ಸ್ವರೂಪ-ವಿಕಾಸಗಳು ಶಿಷ್ಟ ಕಲೆಗಿಂತ ಭಿನ್ನವೇ. `ಕಲೆಗಾಗಿ ಕಲೆ’ ಎಂಬ ಮಾತನ್ನು ಜನಪದ ಕಲೆಗಳ ಸಂದರ್ಭದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಜನಪದ ಜೀವನದ ಒಂದು ಅವಿಭಾಜ್ಯ ಅಂಗವಾಗಿಯೇ ಜನಪದ ಕಲೆ ಬೆಳೆದುಬಂದಿದೆ. ಮೊಗಳ್ಳಿಯವರು ಹೇಳಿರುವಂತೆ `ಜನಪದದಲ್ಲಿ ಕಲೆ ಎಂದರೆ ಜೀವನದ ಆಚರಣೆ, ಬದುಕಿನ ದಾಖಲೆ ಮತ್ತು ಆ ಮೂಲಕ ಮನುಷ್ಯ ಸಂವೇದನೆಗಳನ್ನು ವಿಸ್ತರಿಸಿಕೊಂಡು ಸುಖೀಸ್ಥಿತಿಗಾಗಿ ತವಕಿಸುವುದು’. (ಗಿರಿಜನ ಸಂಸ್ಕೃತಿ, 2002 ಪು.125)
ಜನಪದ ಶಿಲ್ಪಕಲೆಯನ್ನು ಕುರಿತಂತೆ ಜಾನಪದ ವಿಶ್ವಕೋಶದಲ್ಲಿ ಕೆಲವು ಲಕ್ಷಣಗಳನ್ನು ಗುರುತಿಸಲಾಗಿದೆ.
ಅವುಗಳೆಂದರೆ;

1. ಜನಪದ ಸರಳ ಮನೋಭೂಮಿಕೆಗೆ, ಆರ್ಥಿಕ ಸ್ಥಿತಿಗೆ ಒಗ್ಗುವ ಸರಳತೆ ಜನಪದ ಶಿಲ್ಪಗಳ ಮುಖ್ಯ ಅಂಶ. ಸಾಮಗ್ರಿ, ತಂತ್ರ ಮತ್ತು ನಿರೂಪಣೆಯಲ್ಲಿ ಈ ಸರಳತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಮಣ್ಣು, ಕಲ್ಲು, ಮರ, ಮರದ ಹೊಟ್ಟು, ಹಿತ್ತಾಳೆ ಮುಂತಾಗಿ ಆಯಾ ಪ್ರದೇಶಗಳಲ್ಲಿ ದೊರಕುವ ಸಾಮಗ್ರಿಗಳನ್ನಷ್ಟೇ ಶಿಲ್ಪಗಳ ತಯಾರಿಯಲ್ಲಿ ಬಳಸಲಾಗಿರುತ್ತದೆ. ಅತ್ಯಲಂಕರಣ ವಿಧಾನ, ಕ್ಲಿಷ್ಟ ತಂತ್ರಗಳು ಇದರಲ್ಲಿ ಇಲ್ಲ. ನಿರೂಪಣೆಯಲ್ಲಿ ಆಯಾ ಶಿಲ್ಪಗಳಿಗೆ ಸಂಬಂಧಿಸಿದ ಮುಖ್ಯ ಭಾವನೆಗಳ ಅಭಿವ್ಯಕ್ತಿ ಶಿಲ್ಪದ ಗುರಿಯಾಗುತ್ತದೆಯೇ ಹೊರತು ಯಥಾಸ್ಥಿತಿಯ ಸಮಗ್ರ ಪ್ರತಿ ರೂಪೀಕರಣ ಅಥವಾ ಅತಿಚತುರ ನಿರೂಪಣಾ ವಿಧಾನಗಳು ಇವುಗಳಲ್ಲಿ ಇರುವುದಿಲ್ಲ.

2. ಕಲೆಗಾಗಿ ಕಲೆ ಸೃಷ್ಟಿ ಮಾಡಬೇಕೆಂಬ ಉದ್ದೇಶ ಜನಪದ ಶಿಲ್ಪ ಸೃಷ್ಟಿಯಲ್ಲಿ ಇರುವುದಿಲ್ಲ. ಇಲ್ಲಿ ಶಿಲ್ಪಿಗಿಂತಲೂ ಶಿಲ್ಪವನ್ನು ಉಪಯೋಗಿಸುವವರ ದೃಷ್ಟಿ, ಅವಶ್ಯಕತೆಗಳೇ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ. ಯಾರಿಗಾಗಿ ಕಲೆ ನಿರ್ಮಾಣವಾಗುತ್ತದೆಯೋ ಆ ಜನಪದವೇ ಜನಪದ ಶಿಲ್ಪದ ಜೀವಾಳ.

3. ಜನಪದ ಶಿಲ್ಪಗಳು ಕೇವಲ ಕಲಾಕೃತಿಗಳಾಗಿರದೆ ಯಾವುದೋ ಸಾಮಾಜಿಕ ಉದ್ದೇಶಗಳಿಗಾಗಿ (ಉದಾ: ಧರ್ಮ, ಮಾಟ, ವಿನೋದ) ರೂಪಿಸಲ್ಪಟ್ಟಿರುತ್ತದೆ. ಇಲ್ಲಿ ಕಲೆ ಪ್ರಯೋಜನಮೂಲವಾಗಿರುತ್ತದೆ.

4. ಜನಪದ ಶಿಲ್ಪಗಳಲ್ಲದಿದ್ದರೂ ಶಿಲ್ಪಸ್ವರೂಪಗಳೂ ಬಹುಕಾಲ ಮುಂದುವರಿಯುತ್ತಿರುತ್ತವೆ. ಸಂಪ್ರದಾಯಾತ್ಮಕ ಸಮೂಹಪ್ರಜ್ಞೆ ಇವುಗಳ ರಕ್ಷೆ. ನವಸೃಷ್ಟ್ಯಾತ್ಮಕ ವ್ಯಕ್ತಿ ಪ್ರಜ್ಞೆಗೆ ಇಲ್ಲಿ ಸಾಕಷ್ಟು ಸ್ಥಳವಿಲ್ಲ.

ಶಿಷ್ಟ ಕಲೆಗೆ ಹೋಲಿಸಿದರೆ, ಜನಪದ ಕಲೆ ಹೆಚ್ಚು ಸರಳವಾದುದು ಮತ್ತು ಮುಕ್ತವಾದುದು. ಸಹಜತೆ ಮತ್ತು ಮುಗ್ಧತೆಗಳೇ ಅದರ ಲಕ್ಷಣಗಳಾಗಿರುತ್ತವೆ. ಪ್ರಯೋಜನ ಮೂಲವಾಗಿರುವ ಈ ಕಲೆಯಲ್ಲಿ ಕ್ರಮೇಣ ಸೌಂದರ್ಯ ದೃಷ್ಟಿ ಮಿಳಿತಗೊಂಡಿದೆ. ಜನಪದ ಶಿಲ್ಪ ಕಲೆಯ ವಿನ್ಯಾಸದಲ್ಲಿ ಅದನ್ನು ಬಳಸುವವರ ಉದ್ದೇಶ ಮತ್ತು ಪ್ರಯೋಜನ ಮುಖ್ಯವಾಗುತ್ತದೆ.

ಜನಪದ ಕಲೆಗಳನ್ನು ಕುರಿತು ಆಳವಾಗಿ ಅಭ್ಯಾಸ ಮಾಡಿರುವ ಜೀ.ಶಂ. ಪರಮಶಿವಯ್ಯನವರು ಅವುಗಳನ್ನು ವಸ್ತು, ವರ್ಣ, ಪ್ರದರ್ಶನ, ನೃತ್ಯ, ಅಭಿನಯ ಹಾಗೂ ಗಾನಗಳ ಆಧಾರದ ಮೇಲೆ ಆರು ರೂಪಗಳಲ್ಲಿ ವಿಂಗಡಿಸಬಹುದೆಂದು ಅಭಿಪ್ರಾಯಪಟ್ಟಿರುತ್ತಾರೆ. ಇದರಲ್ಲಿ ವಸ್ತುರೂದ ಕಲೆ, ಜನಪದ ಶಿಲ್ಪ ಕಲೆಗೆ ಸಂಬಂಧಪಡುತ್ತದೆ. ಈ ಜನಪದ ಶಿಲ್ಪಕಲೆಯನ್ನು ವಾಸ್ತು ಶಿಲ್ಪ, ಮೂರ್ತಿ ಶಿಲ್ಪ ಮತ್ತು ಸಾಮಾನ್ಯ ಶಿಲ್ಪಗಳೆಂದು ಮತ್ತೆ ಮೂರು ವಿಧದಲ್ಲಿ ವರ್ಗೀಕರಿಸಬಹುದು.
ನಾಗರ ಕಲ್ಲು.
ನಾಗರ ಕಲ್ಲು

`ಜನಪದ ವಾಸ್ತು ಶಿಲ್ಪ’ದಲ್ಲಿ ಊರು-ಕೇರಿ, ಹಟ್ಟಿ-ಗುಡಿಸಲುಗಳ ವೈವಿಧ್ಯ, ಮನೆ-ಮಠಗಳ ಸ್ವರೂಪ, ಕೋಟೆ-ಕೊತ್ತಲಗಳ, ಕೆರೆ-ಕೊಳಗಳ ನಿರ್ಮಾಣಗಳು, ಗುಡಿ-ದೇವಾಲಯಗಳ, ಹಿರಿಯರ ಗುತ್ತು (ಕೈಮಡ)ಗಳ, ದನಗಳ ಕೊಟ್ಟಿಗೆ, ಕಟ್ಟೆ-ಮಂಟಪಗಳ ನಿರ್ಮಾಣಗಳು ಇತ್ಯಾದಿ ಸೇರಿಕೊಳ್ಳುತ್ತವೆ. ಇವೆಲ್ಲವುಗಳ ಹಿಂದಿರುವ ಜನಪದ ತಂತ್ರಜ್ಞಾನ, ಪರಿಸರಸ್ನೇಹಿ ಕಟ್ಟಡ ನಿರ್ಮಾಣ, ಜನಪದರ ಸೌಂದರ್ಯ ಪ್ರಜ್ಞೆ ಮುಂತಾದವು ಸಾಕಷ್ಟು ಕುತೂಹಲಕಾರಿಯಾಗಿವೆ.

`ಜನಪದ ಮೂರ್ತಿಶಿಲ್ಪ’ ಭಾಗದಲ್ಲಿ ದೇವತಾಶಿಲ್ಪಗಳೊಂದಿಗೆ ಇತರ ಶಿಲ್ಪಗಳು, ಮುಖವಾಡಗಳು, ಸೋಮಗಳು, ಸಿಡಿಗಳು, ತೇರುಗಳು ಮುಂತಾದವು ಸೇರಿಕೊಳ್ಳುತ್ತವೆ. ಜನಪದ ನಂಬಿಕೆ ಮತ್ತು ಆಚರಣೆಗಳ ಒಂದು ಭಾಗವಾಗಿ ದೇವತೆಗಳ ಪೂಜೆ ಮತ್ತು ಉಳಿದ ವಸ್ತುಗಳು ಬಳಕೆಗೊಳ್ಳುತ್ತವೆ.

ಸಾಮಾನ್ಯ ಶಿಲ್ಪದಲ್ಲಿ ಮೂರ್ತಿಶಿಲ್ಪಗಳನ್ನು ಬಿಟ್ಟು, ಜನಪದ ಜೀವನದಲ್ಲಿ ಬಳಸುವ ಎಲ್ಲ ವಸ್ತು ವಿಶೇಷಗಳೂ ಸೇರ್ಪಡೆಯಾಗುತ್ತವೆ. ಇದರಲ್ಲಿ ಮುಖ್ಯವಾಗಿ ಪೂಜಾ ಸಾಮಗ್ರಿಗಳು, ಅಡುಗೆ ಮನೆಯ ಸಾಮಗ್ರಿಗಳು, ಮನೆ ಬಳಕೆಯ ವಸ್ತುಗಳು, ಆಟದ ಸಾಮಾನುಗಳು, ವ್ಯವಸಾಯ ಸಾಧನಗಳು, ಹೆಣಿಗೆಯ ಸಾಧನಗಳು ಹೀಗೆ ಜನಪದ ಭೌತಿಕ ಸಂಸ್ಕೃತಿಯ ಅನೇಕ ಕಲಾತ್ಮಕ ವಸ್ತುಗಳನ್ನು ಸೇರಿಸಬಹುದಾಗಿದೆ.

ಜನಪದ ಶಿಲ್ಪಗಳನ್ನು ಅವುಗಳ ರಚನೆಗಾಗಿ ಬಳಸುವ ಕಲ್ಲು, ಮರ, ಮಣ್ಣು, ಲೋಹ, ಸಗಣಿ, ಗಾದೆ ಮುಂತಾದ ಮಾಧ್ಯಮ ವಸ್ತುಗಳ ಮೇಲಿಂದಲೂ ವರ್ಗೀಕರಿಸಿ ಅಧ್ಯಯನ ಮಾಡಲು ಸಾಧ್ಯವಿದೆ.

ಜನಪದ ಶಿಲ್ಪ ಪ್ರಪಂಚ ವಿಸ್ತಾರವಾದುದು. ಜನಪದ ಮೂರ್ತಿ ಶಿಲ್ಪಗಳನ್ನು ಸಾಮಾನ್ಯವಾಗಿ ಕಲ್ಲು, ಮಣ್ಣು, ಮರ, ಲೋಹ, ಗಾರೆ, ಸಗಣಿಗಳಲ್ಲಿ ನಿರ್ಮಿಸಲಾಗುತ್ತದೆ. ಈ ಮೂರ್ತಿಶಿಲ್ಪಗಳು ಬಿಡಿ-ಬಿಡಿಯಾಗಿಯೂ ಇರುತ್ತವೆ; ಕೆಲವೊಮ್ಮೆ ದೇವಾಲಯ, ಮತ್ತಿತರ ಕಟ್ಟಡಗಳ ಭಿತ್ತಿಶಿಲ್ಪವಾಗಿಯೂ ರಚನೆಗೊಂಡಿರುತ್ತವೆ. ಜನಪದ ದೈವಗಳಿಗೆ ಆರಂಭದಲ್ಲಿ ಒಂದು ನಿರ್ದಿಷ್ಟ ಆಕಾರವಿರಲಿಲ್ಲ. ಆಯಾ ದೈವದ ಬಗೆಗಿನ ಕಲ್ಪನೆ ಬೆಳೆಯುತ್ತ ಬಂದಂತೆ ಅವು ಸ್ಪಷ್ಟರೂಪವನ್ನು ಪಡೆಯತೊಡಗಿದವು.
ಒಂದೊಂದು ಫಲಾಪೇಕ್ಷೆಗೆ ಒಂದೊಂದು ದೈವವನ್ನು ಜನಪದರು ಸೃಷ್ಟಿಸಿಕೊಂಡಂತೆ ತೋರುತ್ತದೆ. ಸಂತಾನಫಲಕ್ಕಾಗಿ ಎಲ್ಲಮ್ಮನನ್ನು, ಮಳೆ-ಬೆಳೆಗಾಗಿ ದ್ಯಾಮವ್ವನನ್ನು, ರೋಗ-ರುಜಿನಗಳ ನಿವಾರಣೆಗೆ ಮಾರೆಮ್ಮನನ್ನು, ಊರಿನ ರಕ್ಷಣೆಗಾಗಿ ಚೌಡಮ್ಮನನ್ನು, ಸುಖ-ಸಂಪತ್ತಿಗಾಗಿ ದುರ್ಗಮ್ಮನನ್ನು, ಕಷ್ಟಗಳ ನಿವಾರಣೆಗಾಗಿ ಕಾಳಮ್ಮನನ್ನು, ಮಕ್ಕಳ ಪಾಲನೆಗಾಗಿ ಪಾಲಕಮ್ಮನನ್ನು, ಸಕಲಪೀಡೆಗಳಿಂದ ಪಾರಾಗಲು ಹನುಮಂತನನ್ನು ಸ್ಥಾಪಿಸಿ ಪೂಜಿಸುವ ಸಂಪ್ರದಾಯ ಜನಪದರಲ್ಲಿ ಬೆಳೆದುಬಂದಿದೆ.

ಜೊತೆಗೆ ಕಲ್ಲು, ಮರ ಅಥವಾ ಮತ್ತಾವುದೇ ಮಾಧ್ಯಮದ ಆಯ್ಕೆಯಿಂದ ಹಿಡಿದು ಅವುಗಳ ಮೂರ್ತಿಯನ್ನು ರೂಪಿಸಿ ಪೂಜಿಸುವವರೆಗೂ ಜೊತೆ ಜೊತೆಯಲ್ಲಿ ನಡೆಯುವ ಆಚರಣೆಗಳು ಜನಪದ ಶಿಲ್ಪ ಕುರಿತ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುತ್ತವೆ. ಇಲ್ಲಿ ಈ ಕುರಿತ ಜನಪದರ ನಂಬಿಕೆಯ ಪಾತ್ರವೂ ಅದರ ಹಿಂದಿರುವ ಜನಪದ ಮನಸ್ಸೂ ಮುಖ್ಯವಾಗುತ್ತದೆ.

ಕಲ್ಲು, ಮಣ್ಣು, ಮರದ ಮೂರ್ತಿಗಳು

ಸಾಮಾನ್ಯವಾಗಿ ಕಲ್ಲಿನಲ್ಲಿ ಹನುಮಂತ, ಬಸವಣ್ಣ, ಉಡಚಮ್ಮ, ದುರ್ಗಮ್ಮ, ಹುಲಿಗಮ್ಮ, ವೀರಭದ್ರರನ್ನಲ್ಲದೆ, ಆಯಾ ಊರಿನ `ಅಮ್ಮ’ನ ಹೆಸರಿನಲ್ಲಿ ಅಸಂಖ್ಯಾತ ಸ್ತ್ರೀ ಗ್ರಾಮದೇವತೆಗಳನ್ನು ನಿರ್ಮಿಸಲಾಗುತ್ತದೆ. ಕಲ್ಲು, ಶಾಶ್ವತತೆಯ ಸಂಕೇತವಾಗಿದ್ದು, ಬಹುಕಾಲ ಉಳಿಯಬೇಕೆಂಬ ಆಶಯ ಇಂಥ ಮೂರ್ತಿ ಶಿಲ್ಪಗಳ ನಿರ್ಮಿತಿಯ ಹಿಂದಿದೆ. ಪ್ರಾದೇಶಿಕ ಶೈಲಿಯನ್ನು ಒಳಗೊಂಡ ಈ ಶಿಲ್ಪಗಳು ಜನಪ್ರಿಯವೂ ಆಗಿದ್ದು, ಸುತ್ತ-ಮುತ್ತಲಿನ ಊರಿನವರೂ ನಡೆದುಕೊಳ್ಳುತ್ತಾರೆ. ಹನುಮನಾಳದ ಉಡಚಮ್ಮ, ಬಳ್ಳಾರಿ ದುರ್ಗಮ್ಮ, ಕುಕನೂರ ಮಹಾತಾಯಿ, ಉಚ್ಚಂಗಿ ಎಲ್ಲಮ್ಮ, ಶಿರಸಂಗಿ ಕಾಳಮ್ಮ ಮುಂತಾದ ಜನಪದ ದೇವತೆಗಳನ್ನು ಇಲ್ಲಿ ಹೆಸರಿಸಬಹುದು. ಕಲ್ಲಿನಲ್ಲಿ ದೇವರ ಮೂರ್ತಿಗಳಲ್ಲದೆ ತೇರು ಮತ್ತು ಮಂಟಪಗಳನ್ನೂ ನಿರ್ಮಿಸಲಾಗುತ್ತದೆ.

ಮರದಿಂದ ಎಲ್ಲಮ್ಮ, ಮಾರಮ್ಮ, ಕಾಳಮ್ಮ, ಪಾಲಕಮ್ಮ, ದ್ಯಾಮವ್ವ, ದುರ್ಗವ್ವ, ಚೌಡವ್ವ ಮತ್ತಿತರ ಜನಪದ ದೈವಗಳನ್ನು ರೂಪಿಸಲಾಗುತ್ತದೆ. ದೇವಿ, ಮರದ ಬೊಡ್ಡೆಯ ರೂಪದಲ್ಲಿರಬಹುದು ಅಥವಾ ಸ್ತ್ರೀ ರೂಪವನ್ನು ಹೊಂದಿರಬಹುದು. ಮರದ ವಿಗ್ರಹಗಳಿಗೆ ಅವು ಕೆಡದಂತೆ ದೇಶಿ ತಂತ್ರಜ್ಞಾನದಿಂದ ತಯಾರಿಸಿದ ಬಣ್ಣವನ್ನು ಹಚ್ಚಲಾಗುತ್ತದೆ. ದೈವಗಳಲ್ಲಿ ಸೌಮ್ಯ ಮತ್ತು ಉಗ್ರ ಸ್ವಭಾವದ ದೈವಗಳು ಇರುವುದರಿಂದ ಉಗ್ರ ಸ್ವಭಾವದ ದೈವಗಳಿಗೆ ಕಪ್ಪು, ಕೆಂಪು ಮತ್ತು ಹಳದಿ ಮುಂತಾಗಿ ಕಡುಬಣ್ಣಗಳ ಬಳಕೆ ಸಾಮಾನ್ಯ.
ಕಟ್ಟಿಗೆಯ ಮೂರ್ತಿಗಳನ್ನು ಸಾಮಾನ್ಯವಾಗಿ ಬಡಿಗೇರರು ತಯಾರು ಮಾಡುತ್ತಾರೆ. ಯಾವ ದೇವರ ಮೂರ್ತಿ ನಿರ್ಮಾಣಕ್ಕೆ ಯಾವ ಮರವನ್ನು ಯಾವಾಗ ಕಡಿದು ತರಬೇಕೆನ್ನುವುದು ಅವರಿಗೆ ಅನುಭವದಿಂದ ತಿಳಿದಿರುತ್ತದೆ. ಅಮವಾಸ್ಯೆ ಆದಿತ್ಯವಾರ ಬಂದಿದ್ದರೆ ಯಾವ ವಿಗ್ರಹಕ್ಕಾದರೂ ಮರ ಕಡಿದು ತರಲು ಅಡ್ಡಿಯಿಲ್ಲ. ಅದಿಲ್ಲವಾದರೆ ದೇವಿಯ ಶಿಲ್ಪ ನಿರ್ಮಾಣಕ್ಕೆ ಮಂಗಳವಾರ ಅಥವಾ ಶುಕ್ರವಾರ, ಹನುಮಂತನಿಗಾದರೆ ಶನಿವಾರ, ವೀರಭದ್ರನಿಗಾದರೆ ಸೋಮವಾರ.
ದೇವರ ಪ್ರಭಾವಳಿ

ಅಂದು ಸ್ನಾನ ಮಾಡಿ, ಶುಚಿರ್ಭೂತರಾಗಿ ಮಡಿಯುಟ್ಟು ಮರದ ಭಾಗ ಕಡಿದು ತಂದು ನೆರಳಿನಲ್ಲಿ ಒಣಗಿಸುವರು. ಗ್ರಾಮದೇವತೆಗಳ ಮೂರ್ತಿ ನಿರ್ಮಾಣಕ್ಕೆ ಬಸರಿ, ಆಲಗೌರಿ, ಮಡ್ಡಿ, ಮಳಗಿ, ಶ್ರೀಗಂಧ ಮುಂತಾದ ಮರಗಳ ಕಟ್ಟಿಗೆಗಳನ್ನು ವಿಶೇಷವಾಗಿ ಬಳಸುವರು. ಕೆಲವೊಮ್ಮೆ ಮಾವು, ಜಾಲಿ, ಹುಣಿಸೆ, ಬೇವಿನ ಮರಗಳನ್ನೂ ಬಳಸಿಕೊಳ್ಳುವುದುಂಟು. ಮೊದಲು ಬಾಚಿಯಿಂದ ಕೆತ್ತಿ ವಿಗ್ರಹದ ಅಸ್ಪಷ್ಟ ರಚನೆ ಮಾಡಿಕೊಂಡು, ನಂತರ ಸ್ಪಷ್ಟಗೊಳಿಸುತ್ತ ಶಿಲ್ಪವನ್ನು ನುಣುಪು ಮಾಡುತ್ತ ಹೋಗುವರು. ಶಿಲ್ಪಕ್ಕೆ ಯಾವುದೇ ಊನ ಒದಗದಂತೆ ಕುಲದೇವತೆ ಕಾಳಮ್ಮನನ್ನು ಬೇಡಿಕೊಳ್ಳುವರು.

ಜನಪದ ಮೂರ್ತಿ ಶಿಲ್ಪಗಳ ರಚನೆಗೆ ಹೆಚ್ಚಿನ ವೆಚ್ಚ ತಗಲದಿದ್ದರೂ ಸಾಂಪ್ರದಾಯಿಕವಾಗಿ ಕೆಲವು ದೇವತೆಗಳನ್ನು ಹೊಣೆಗಾರಿಕೆಯ ವ್ಯಕ್ತಿಗಳು ಮಾತ್ರ ಮಾಡಿಸಬಹುದಾಗಿದೆ. ಜನಪದದ ಪ್ರಮುಖ ಲಕ್ಷಣವಾದ ಸಮೂಹಪ್ರಜ್ಞೆ ಮತ್ತು ಸಮಷ್ಟಿ ಒಳಿತು ಇಂಥಲ್ಲಿ ಅಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮರಗಮ್ಮನನ್ನು ಊರಿನ ಕುಲಕರ್ಣಿ, ದ್ಯಾಮವ್ವನನ್ನು ಮಾಲಗೌಡರು, ಪಾಲಕಮ್ಮ, ಎಲ್ಲಮ್ಮ ದೇವತೆಗಳನ್ನು ತಳವಾರರು ಇಲ್ಲವೆ ಹರಕೆ ಹೊತ್ತವರು ಮಾಡಿಸಿಕೊಡುತ್ತಾರೆ.

 

Author : ಸೀಮಾ ಎಸ್ ಭಟ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited