Untitled Document
Sign Up | Login    
ಹಿಂದೂ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮದ ಶ್ರೇಷ್ಠತೆ

ಅರಿಶಿನ ಕುಂಕುಮ

ಭಾರತೀಯ ಸಂಸ್ಕೃತಿಯಲ್ಲಿ ಅರಿಶಿನ ಕುಂಕುಮಕ್ಕೆ ಶ್ರೇಷ್ಠ ಸ್ಥಾನವಿದೆ. ದೇವತಾ ಕಾರ್ಯಗಳಲ್ಲಿ, ಶುಭಕಾರ್ಯಗಳಲ್ಲಿ ಅರಿಶಿನ ಕುಂಕುಮವೇ ಶೋಭೆ. ಇವು ಹಿಂದೂ ಸಂಸ್ಕೃತಿಯ ಪ್ರತೀಕವೂ ಹೌದು.

ನಮ್ಮ ಸಂಸ್ಕೃತಿ ಸಂಸ್ಕಾರದಲ್ಲಿ, ಸಂಪ್ರದಾಯಗಳಲ್ಲಿ ಅರಿಶಿನ ಕುಂಕುಮದ ಬಳಕೆ ಸರ್ವೇ ಸಾಮಾನ್ಯ. ಈ ಅರಿಶಿನ ಕುಂಕುಮದ ಬಳಕೆ ಎಲ್ಲಿಂದ ಹುಟ್ಟಿರಬಹುದು, ಎಂಬುದೂ ಕೂಡ ಹೇಳುವುದು ಕಷ್ಟ. ಯಾಕೆಂದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಪಂಪರೆಗಳಲ್ಲಿ ಅನಾದಿಯಿಂದಲೂ ಅರಿಶಿನ ಕುಂಕುಮ ಬಳಕೆಯಲ್ಲಿದೆ.

ಮೊದಲು ಕಾಡಿನಲ್ಲಿ ವಾಸಿಸುತ್ತಿದ್ದ ಮಾನವ ನಾಗರಿಕನಾಗಿ ಬದಲಾಗುವ ಅವಧಿಯಲ್ಲಿಯೇ ಔಷಧೀಯ ಗುಣವುಳ್ಳ ಅರಿಶಿನ ಕುಂಕುಮವನ್ನು ಬಳಕೆಯಲ್ಲಿಟ್ಟುಕೊಂಡಿದ್ದ. ಹಲವು ಸಮಸ್ಯೆಗಳಿಗೆ ಔಷಧಿಯಾಗಿ ಬಳಸುತ್ತಿದ್ದ ಈ ವಸ್ತುಗಳಿಗೆ ಅವುಗಳಲ್ಲಿರುವ ಔಷಧೀಯ ಗುಣಗಳಿಗಾಗಿಯೇ ಪೂಜಿಸಲು ಪ್ರಾರಂಭಿಸಿದ. ಈ ಶ್ರೇಷ್ಠ ವಸ್ತುವನ್ನೂ ಬಳಸಿ ಆರಾಧಿಸುವ ಆಚಾರವನ್ನು ಬಳಕೆಯಲ್ಲಿ ತಂದ.

ಪೂಜಾ ತಟ್ಟೆಯಲ್ಲಿ ಅರಿಶಿನ ಕುಂಕುಮ
ವಿಶಿಷ್ಟ ಬಣ್ಣಗಳಿಂದ ಆಕರ್ಷಕವಾಗಿರುವ ಅರಿಶಿನ ಮತ್ತು ಕುಂಕುಮ ಸೌಂದರ್ಯ ಪ್ರಸಾದನವಾಯ್ತು. ಸೌಂದರ್ಯಕ್ಕಾಗಿ ಹೆಣ್ಣುಮಕ್ಕಳು ಅರಿಶಿನ ಕುಂಕುಮವನ್ನು ಬಳಸಲು ಪ್ರಾರಂಭಿಸಿದರು. ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಕುಂಕುಮ, ಅರಿಶಿನವು ಶುಭದ ಸಂಕೇತವಾಯ್ತು.

ಅನಾದಿಕಾಲದಿಂದಲೂ ಹಿಂದೂ ಸಂಸ್ಕೃತಿಯ ಯಾವುದೇ ಪೂಜೆಯೂ ಅರಿಶಿನ ಕುಂಕುಮದ ಹೊರತಾಗಿ ನಡೆದಿಲ್ಲ. ಪೂಜೆಯ ಒಂದು ಅವಿಭಾಜ್ಯ ಅಂಗವಾಗಿರುವ ಅರಿಶಿನ ಕುಂಕುಮವು ಶುಭಕಾರ್ಯಗಳ ಆಚರಣೆಯಲ್ಲಿ ಬಳಸಲೇಬೇಕಾದ ಅತ್ಯಂತ ಶ್ರೇಷ್ಠ ವಸ್ತುವಾಗಿದೆ. ಸಂಸ್ಕೃತಿಗಳಲ್ಲಿ ಅಡಕವಾಗಿಹೋದ ಈ ವಸ್ತುಗಳ ಬಳಕೆ ಜನರ ಮನಸ್ಸಿನ ಭಾವನೆಗಳೊಂದಿಗೆ ಒಂದಾಗಿದೆ.

ಅರಿಶಿನ ಕುಂಕುಮ ಅಂದಾಕ್ಷಣ ನೆನಪಿಗೆ ಬರುವುದು ಹೆಣ್ಣು. ಎಲ್ಲಾ ಸಂಸ್ಕೃತಿಯ ಹರಿಕಾರಳೂ ಹೆಣ್ಣೇ. ಸಂಸ್ಕೃತಿಯನ್ನು, ಸಂಪ್ರದಾಯವನ್ನು ಜತನವಾಗಿ ಪೀಳಿಗೆಯಿಂದ ಪೀಳಿಗೆಗೆ ಸಾವಿರಾರು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿರುವ ಹೆಣ್ಣಿಗೆ ಅರಿಶಿನ ಕುಂಕುಮ ಭಾಗ್ಯದ ಸಂಕೇತ. ಹಣ್ಣಿನ ಸಂಕೇತವೇ ಕುಂಕುಮವಾಗಿದೆ.
ಮುತ್ತೈದೆ ಹೆಣ್ಣಿಗೆ ಅರಿಶಿನ ಕುಂಕುಮ, ಹೂವು, ಹಣ್ಣು ನೀಡಿ ಸತ್ಕರಿಸಿದರೆ ಪುಣ್ಯ ಪ್ರಾಪ್ತಿ ಎಂಬುದು ನಮ್ಮ ಆಚರಣೆಯಲ್ಲಿಯ ನಂಬಿಕೆ. ಹಬ್ಬ ಹರಿ ದಿನಗಳಲ್ಲಿ, ಶುಭ ಕಾರ್ಯಗಳಲ್ಲಿ , ವೃತಗಳಲ್ಲಿ, ಮಹಾ ಯಜ್ಞ ಯಾಗಗಳಲ್ಲಿ, ಪೂಜೆಗಳಲ್ಲಿ, ಅರ್ಚನೆಗಳಲ್ಲಿ ಅರಿಶಿನ ಕುಂಕಮಕ್ಕೆ ಪ್ರಾಧಾನ್ಯತೆ ಇದೆ. ಸೌಭಾಗ್ಯ ಅಮರವಾಗಿರಲಿ ಎಂದು ಬೇಡಿಕೊಳ್ಳುವ ಮುತ್ತೈದೆಯರು ತಮ್ಮ ತಾಳಿಗೆ ಅರಿಶಿನ ಕುಂಕುಮ ಹಚ್ಚಿ ಪೂಜಿಸುವುದೂ ಕೂಡ ರೂಢಿಯಲ್ಲಿದೆ. ಸಕಲ ಜೀವರಾಶಿಗಳ ಬಾಯಾರಿಕೆ ತಣಿಸುವ ಜಲದೇವತೆಗೂ ಕೂಡ ಅರಿಶಿನ ಕುಂಕುಮದ ಬಾಗಿನ ನೀಡುವ ಸಂಸ್ಕೃತಿಯೂ ನಮ್ಮಲ್ಲಿದೆ.

ಇಂಥ ಭಾಗ್ಯದ, ಮಂಗಳದ ಸಂಕೇತವಾಗಿರುವ ಅರಿಶಿನ ಕುಂಕುಮ ಅಖಂಡ ಭಾರತದ ಹಿಂದೂ ಸಂಸ್ಕೃತಿಯಲ್ಲಿಯೇ ಹಾಸು ಹೊಕ್ಕಿದೆ. ಭಾರತೀಯ ಸಂಸ್ಕೃತಿಯ ಪ್ರತಿನಿಧಿಸುವ ಅಮೂಲ್ಯ ವಸ್ತುವಾಗಿರುವ ಅರಿಶಿನ ಕುಂಕುಮವು ಹಿಂದೂ ಪರಂಪರೆಯ ಅವಿಭಾಜ್ಯ ಅಂಗ ಎಂದರೂ ತಪ್ಪಿಲ್ಲ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited