ಬೆಂಗಳೂರು ಗಣೇಶ ಉತ್ಸವದ ರೂವಾರಿ ನಂದೀಶ್..
ಬೆಂಗಳೂರಿನಲ್ಲಿ ಪ್ರತಿವರ್ಷ ಗಣೇಶೋತ್ಸವ ಆಚರಣೆ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಸಂಭ್ರಮ. ಎ.ಪಿ.ಎಸ್. ಶಾಲಾ ಅಂಗಳದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಈ ಉತ್ಸವಕ್ಕೆ ಹೊಸ ಮೆರುಗನ್ನು ಕೊಟ್ಟು, ಅತ್ಯಂತ ವ್ಯವಸ್ಥಿತವಾಗಿ ರೂಪುಗೊಳಿಸಿ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೊಡುತ್ತಾ, ಸಾರ್ವಜನಿಕ ಉತ್ಸವಗಳಿಗೂ ಇವೆಂಟ್ ಮ್ಯಾನೇಜ್ ಮೆಂಟ್ ತಂತ್ರಗಳು ಯಾವ ರೀತಿ ಸಹಾಯಕವಾಗಬಲ್ಲವು ಎಂಬುದನ್ನು ಮನಗಾಣಿಸುತ್ತಾ ಮೆಗಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುವಲ್ಲಿ ತಮ್ಮದೇ ಛಾಪು ಮೂಡಿಸಿದ ಡೈನಮಿಕ್ ಯುವಕ ನಂದೀಶ್.
ಉದ್ಯಮಿ ಎ.ಮರಿಯಪ್ಪ-ಜಯರತ್ನಮ್ಮ ದಂಪತಿಯ ದ್ವಿತೀಯ ಪುತ್ರ ಎಸ್.ಎಂ.ನಂದೀಶ್. ಇವರ ಸಹೋದರ ಡಾ.ರಮೇಶ್ ಅಮೆರಿಕದಲ್ಲಿದ್ದಾರೆ. ಇವರ ಸಹೋದರಿ ಮಂಜುಳಾ.
ಬೆಂಗಳೂರಿನ ನಿವೇದಿತಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ನಂದೀಶ್ ವಿ.ವಿ.ಪುರಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಇವರಿಗೆ ಶಾಲಾ ಕಾಲೇಜು ದಿನಗಳಲ್ಲಿ ಈಜು, ಕ್ರಿಕೆಟ್, ಎನ್.ಸಿ.ಸಿ., ಟ್ರೆಕ್ಕಿಂಗ್ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ. ಎನ್.ಸಿ.ಸಿ. ಯಲ್ಲಿ ಕರ್ನಾಟಕ ಗೋವಾ ವಿಭಾಗದ ಕೆಡೇಟ್ ಮುಖ್ಯಸ್ಥ. ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತ. ಓದು ಒಂದು ಹಂತಕ್ಕೆ ಬಂದ ಮೇಲೆ ತಂದೆಯವರ ವ್ಯಾಪಾರ ವಹಿವಾಟುಗಳನ್ನು ನೋಡಿಕೊಳ್ಳತೊಡಗಿದರು.
ಗಣೇಶೋತ್ಸವದಲ್ಲಿ ಖ್ಯಾತ ಪಾಪ್ ಗಾಯಕಿ ಉಷಾ ಉತ್ತುಪ್..
ಆದರೂ ಆವರು ಒಲವು ತೋರಿದ್ದು ಇವೆಂಟ್ ಮ್ಯಾನೇಜ್ ಮೆಂಟ್ ಕ್ಷೇತ್ರದತ್ತ. ಅದರಲ್ಲಿ ಅವರು ಆಳವಾಗಿ ತೊಡಗಿಸಿಕೊಂಡರು. ಹೊಸ ಹೊಸ ಪ್ರಯೋಗಗಳೊಂದಿಗೆ ವಿಭಿನ್ನತೆ ಮೆರೆದರು.
ತಂದೆ ತಾಯಿಯ 25 ನೇ ವಿವಾಹ ಮಹೋತ್ಸವದ ಬೆಳ್ಳಿ ಹಬ್ಬ, ತಂದೆಯವರ ಷಷ್ಠಿ ಪೂರ್ತಿ ಅಂಗವಾಗಿ ’ಮರಿ 60’ ಸಮಾರಂಭಗಳನ್ನು ಹಮ್ಮಿಕೊಂಡು ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಚಕಿತಗೊಳಿಸಿದರು. ಆ ಸಮಾರಂಭಗಳ ಅಚ್ಚುಕಟ್ಟುತನ ಅಷ್ಟೊಂದು ವಿಭಿನ್ನವಾಗಿತ್ತು. ತಾನು ವಹಿಸಿಕೊಂಡ ಯಾವುದೇ ಕಾರ್ಯಕ್ರಮವಿರಲಿ, ಅದನ್ನು ಅತ್ಯಂತ ಕಾಳಜಿಯಿಂದ ನಿಯೋಜಿಸಿ ಯಾವುದೇ ರೀತಿಯ ಅಡಚಣೆಯಾಗದಂತೆ ಯಶಸ್ವಿಯಾಗಿ ನಿರ್ವಹಿಸುವ ಕಲೆಯನ್ನು ಅವರು ಮೊದಲಿನಿಂದಲೇ ಮೈಗೂಡಿಸಿಕೊಂಡಿದ್ದಾರೆ.
ಗಣೇಶೋತ್ಸವದಲ್ಲಿ ಖ್ಯಾತ ಬಾಲಿವುಡ್ ತಾರೆ ಕರೀನಾ ಕಪೂರ್ ಪ್ರದರ್ಶನ ನೀಡುತ್ತಿರುವುದು..
ಮುಂದೆ ಅವರು ತನ್ನದೇ ’ರೀಚ್ ಇವೆಂಟ್ಸ್’ ಸಂಸ್ಥೆ ಪ್ರಾರಂಭಿಸಿ ರಾಷ್ಟ್ರಾದ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಹಲವು ಇವೆಂಟ್ ಗಳನ್ನು ವ್ಯವಸ್ಥೆಗೊಳಿಸಿದರು. ಐ.ಬಿ.ಎಂ, ಫಿಲಿಪ್ಸ್, ಎಂ.ಇ.ಜಿ, ಕೇಡಂ, ಜಾನ್ಸನ್ ಅಂಡ್ ಜಾನ್ಸನ್ ಮುಂತಾಗಿ ಹಲವಾರು ಕಂಪೆನಿಗಳಿಗೆ ಸಾಕಷ್ಟು ಮೆಗಾ ಇವೆಂಟ್ಸ್ ಗಳನ್ನು ಮಾಡಿಕೊಟ್ಟು ತನ್ನ ಪ್ರತಿಭೆಯನ್ನು ನಿರೂಪಿಸಿದರು.
ಪ್ರಸ್ತುತ ಬಸವನಗುಡಿಯ ಶ್ರೀ ವಿದ್ಯಾರಣ್ಯ ಯುವಕ ಸಂಘದ ವ್ಯವಸ್ಥಾಪಕ ಧರ್ಮದರ್ಶಿಯಾಗಿರುವ ನಂದೀಶ್ ಅವರು ಎ.ಪಿ.ಎಸ್. ಮತ್ತು ನ್ಯಾಶನಲ್ ಕಾಲೇಜು ಮೈದಾನಗಳಲ್ಲಿ ಗಣೇಶ ಹಬ್ಬದ ಕಾರ್ಯಕ್ರಮಗಳನ್ನು ವೈವಿಧ್ಯವಾಗಿ ಹಮ್ಮಿಕೊಳ್ಳುತ್ತಾ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬೆಂಗಳೂರು ಗಣೇಶೋತ್ಸವದಲ್ಲಿ ಹಿಂದಿ ಚಿತ್ರನಟ ಗೋವಿಂದ್ ಮತ್ತು ತಂಡದವರು..
ಕಠಿಣ ಪರಿಶ್ರಮ, ಸಂಘಟನಾ ಚಾತುರ್ಯ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ನಂದೀಶ್ ಅವರದ್ದು ವಯಸ್ಸಿಗೆ ಮೀರಿದ ಸಾಧನೆ. ಪಾದರಸದಂತೆ ಚುರುಕಾಗಿ ಓಡಾಡುತ್ತ ತಮ್ಮ ತಂಡದವರನ್ನು ಹುರಿದುಂಬಿಸುತ್ತ ದಿನವಿಡೀ ಚಟುವಟಿಕೆಯಿಂದಿರುವ ನಂದೀಶ್ ನೋಡಲು ಸಾಮಾನ್ಯರಂತೆ ಕಂಡರೂ ಅವರ ಕಾರ್ಯಶೈಲಿ ಅದ್ಭುತವಾಗಿದ್ದು, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
Author : ಜಿ.ಜಿ. ನಾಗರಾಜ