ಭಾತೃತ್ವದ ಸಂಕೇತ ರಕ್ಷಾಬಂಧನ.....
ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೆ ಆದ ವಿಶೇಷತೆಯಿದೆ. ಅಲ್ಲದೆ ಸಂಭಂದಗಳಿಗೆ ಮಹತ್ವಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ ಹಬ್ಬವಾದ ರಕ್ಷಾಬಂಧನವು ಸಹ ಐತಿಹಾಸಿಕ ಕಥೆಗಳನ್ನೊಳಗೊಂಡಿದೆ. ಅಂದು ಯುದ್ಧದಲ್ಲಿ ಇಂದ್ರನು ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಇಂದ್ರನು ಬೃಹಸ್ಪತಿಯ ಮೊರೆ ಹೋಗುತ್ತಾನಂತೆ ಬೃಹಸ್ಪತಿಯ ಸಲಹೆಯ ಮೇರೆಗೆ ಶ್ರಾವಣ ಹುಣ್ಣಿಮೆಯಂದು ರೇಷ್ಮೆ ದಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೋ ಏನೋ ಇಂದ್ರನು ಯುದ್ಧದಲ್ಲಿ ಜಯ ಹೊಂದುತ್ತಾನಂತೆ. ಇದು ಪೌರಾಣಿಕ ಕಥೆ ಈ ಹಿನ್ನಲೆಯಿಂದಲೇ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುವುದು ಪ್ರತೀತಿ.
ತಂಗಿ ತನ್ನ ಅಣ್ಣನ ಯಶಸ್ಸು, ಶ್ರೇಯೋಭಿವೃದ್ದಿ ಹಾಗೇನೇ ಅವನ ಬಾಳಲ್ಲಿ ನೆಮ್ಮದಿಯನ್ನು ಕರುಣಿಸಿ ರಕ್ಷಿಸು ಎಂದು ಹಾರೈಸುವ ಮುಖಾಂತರ ರಾಖಿಯನ್ನು ಕಟ್ಟುವುದು ವಾಡಿಕೆ. ಶ್ರಾವಣ ಹುಣ್ಣಿಮೆಯಂದು ಬರೋ ಈ ಹಬ್ಬ ಅಣ್ಣ-ತಂಗಿಯ ಸಂಭಂದಕ್ಕೆ ಅರ್ಥ ಕಲ್ಪಿಸೋ ಪವಿತ್ರವಾದ ದಿನ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಹಬ್ಬವನ್ನು ಇತ್ತೀಚೆಗೆ ದಕ್ಷಿಣ ಭಾರತದಲ್ಲಿಯೂ ಆಚರಿಸಲಾಗುತ್ತಿದೆ. ಭಾರತದೆಲ್ಲೆಡೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರು ಈ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸೋದೇ ಈ ದಿನದ ವಿಶೇಷ.
ಬ್ರಾಹ್ಮಣರು ಈ ದಿನವನ್ನು ನೂಲು ಹುಣ್ಣಿಮೆ ಎಂದು ಆಚರಿಸುತ್ತಾರಲ್ಲದೆ ತಮ್ಮ ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ತೊಡುವುದು ವಾಡಿಕೆ. ತಂಗಿಯಾದವಳು ಅಣ್ಣನ ಹಣೆಗೆ ಕುಂಕುಮದ ತಿಲಕವನ್ನಿಟ್ಟು ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗಿ ಸಿಹಿಯನ್ನು ಬಾಯಿಗೆ ನೀಡಿ ಅಣ್ಣನಿಂದ ಉಡುಗೊರೆ ಪಡೆಯುವ ಮೂಲಕ ಅತೀ ಸಂತಸದಿಂದ ಆಚರಿಸೋ ಹಬ್ಬಾನೇ ರಕ್ಷಾಬಂಧನ.
ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ರಾಖಿ ಸೊಬಗು ತಿಂಗಳ ಮುಂಚೇನೇ ಕಾಣ ಸಿಗೋದು ಹೊಸತೇನಲ್ಲ. ವಿಧವಿಧವಾದ ರಾಖಿ ಒಂದಕ್ಕಿಂತ ಒಂದು ಭಿನ್ನ ಅಲ್ಲದೆ ಒನ್ಲೈನ್ ಮೂಲಕ ಕೂಡ ರಾಖಿಯನ್ನು ಖರೀದಿಸೋ ಸೌಲಭ್ಯ ನಮ್ಮಲ್ಲಿದೆ. ಪರದೇಶದಲ್ಲಿರುವವರಿಗೆ ಅಣ್ಣ-ತಮ್ಮಂದಿರಿಗೆ ಗ್ರೀಟಿಂಗ್ಸ್ ಮುಖಾಂತರನೂ ರಾಖಿನ ಕಳಿಸಿ ಶುಭ ಹಾರೈಸಲಾಗುತ್ತದೆ. ಇನ್ನು ರಾಖಿ ಖರೀದಿ ಒಂದು ಸಂಭ್ರಮವೇ ಸರಿ ಎಲ್ಲರೂ ಡಿಫೆರೆಂಟ್ ಆಗಿರೋ ರಾಖಿಯನ್ನು ಖರೀದಿಸೋ ಭರಾಟೆಯಲ್ಲಿರುತ್ತಾರೆ ಹೀಗೆ ಈ ಹಬ್ಬದ ತಯಾರಿಯಲ್ಲಿ ಅಕ್ಕ-ತಂಗಿಯರ ಶಾಪಿಂಗ್ ಜೋರಾಗಿಯೇ ನಡೆಯುತ್ತದೆ. ಆದರೆ ಇಂದು ರಕ್ಷಾಬಂಧನ ಆದುನೀಕರಣಕ್ಕೆ ಸಿಲುಕಿ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಿದೆ ಎಂದರೆ ವಿಪರ್ಯಾಸವೇ ಸರಿ.
ಕೆಲವರು ಷ್ಯಾಶನ್ಗೋಸ್ಕರ ಈ ದಾರವನ್ನು ಕಟ್ಟಿಸಿಕೊಂಡರೆ ಇನ್ನು ಕೆಲವರು ಹುಡುಗಿಯನ್ನು ಪಠಾಯಿಸಲು ಕಟ್ಟಿಸಿಕೊಳ್ಳುವವರೂ ಇದ್ದಾರೆ. ಉಡುಗೊರೆ ಪಡೆಯುವ ಸಲುವಾಗಿ ರಾಖಿ ಕಟ್ಟುವವರು ಅದೆಷ್ಟೋ ಮಂದಿ ಒಟ್ಟಾರೆ ರಾಖಿಯ ಮಹತ್ವ ಹಾಗೂ ಹಿನ್ನಲೆಯನ್ನು ತಿಳಿದುಕೊಂಡವರು ಬೆರಳಣಿಕೆಯಷ್ಟು ಮಾತ್ರ. ಈ ಪವಿತ್ರವಾದ ದಾರ ಭಾತೃತ್ವದ ಸಂಕೇತ ಇಂದು ಹೆಚ್ಚಾಗಿ ಈ ದಾರವನ್ನು ಪ್ರಪೋಸ್ ಮಾಡಿದ ಹುಡುಗರನ್ನು ರಿಜೆಕ್ಟ್ ಮಾಡುವ ಆಯುಧವನ್ನಾಗಿ ಉಪಯೋಗಿಸಲಾಗುತ್ತಿದೆ ಎಂದರೆ ತಪ್ಪಾಗಲಾರದು.
ಅದೇನೇ ಇರಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಅಣ್ಣ-ತಂಗಿಯರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸುತ್ತಾ ಎಲ್ಲರಿಗೂ ರಕ್ಷಾಬಂಧನ ಹಬ್ಬದ ಶುಭಾಶಯಗಳು.
Author :
Share :
More Articles From Art & Culture