ಇದು ಗುತ್ತು ಮನೆ. ನೂರು ವರ್ಷಗಳಿಗೂ ಹೆಚ್ಚು ವರ್ಷವಾಗಿರುವ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ಬಳಿಯ ಹುಣಿಪ್ಪಾಜೆಗುತ್ತು ಮನೆ ಇಂದಿಗೂ ತನ್ನ ಗುತ್ತಿನ ಗತ್ತನ್ನು ಉಳಿಸಿಕೊಂಡಿದೆ. 3 ಮಾಳಿಗೆಯ ಈ ಗುತ್ತು ಮನೆ ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗದೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿರುವುದು ವಿಶೇಷತೆ.
ಹುಣಿಪ್ಪಾಜೆಗುತ್ತು ರತನ್ ಕುಮಾರ್ ಜೈನ್ ಈ ಗುತ್ತು ಮನೆಯ ಯಜಮಾನರು. ಸುಮಾರು ನೂರು ವರ್ಷಗಳಿಗೂ ಹಿಂದೆ ತಮ್ಮ ಹಿರಿಯರು ನಿರ್ಮಿಸಿದ ಈ ಮನೆಯ ಸೊಬಗನ್ನು ಉಳಿಸಿಕೊಳ್ಳುವಲ್ಲಿ ಅವರು ಪ್ರಾಧ್ಯಾನ್ಯತೆ ನೀಡಿದ್ದಾರೆ.
ಮನೆಯ ಕೆಲವೊಂದು ಭಾಗಗಳು ಹಾಳಾದ ಹಿನ್ನಲೆಯಲ್ಲಿ ಹಿಂದಿನ ಮಾದರಿಯಲ್ಲಿ ಪುನರ್ ನಿರ್ಮಿಸಿದ್ದು ಬಿಟ್ಟರೆ ನೂರು ವರ್ಷಗಳ ಹಿಂದೆ ಮಾಡಿದ ಸುಣ್ಣ ಬಣ್ಣ ಕೆಡದೆ ಅದೇ ರೀತಿ ಇರುವುದು ವಿಶೇಷ. ಮನೆಯ ಮಾಳಿಗೆಯೊಂದರ ಕೋಣೆಯಲ್ಲಿ ಬಾಹುಬಲಿ ಮೂರ್ತಿಯ ಸುಂದರ ಪೈಂಟಿಂಗ್ ಆಕರ್ಷಣೀಯವಾಗಿದೆ. ಗೋಡೆಗಳಿಗೆ ಮಾಡಿರುವ ಪೈಂಟಿಂಗ್ ಅತ್ಯಾರ್ಕಕವಾಗಿದ್ದು, ಇಂದಿಗೂ ಅದು ಉಳಿದುಕೊಂಡಿರುವುದು ನಿಜಕ್ಕೂ ಅದ್ಭುತ. ಹಿಂದಿನ ಕಾಲದ ಹರಿವಾಣ, ಚಿತ್ರಪಟಗಳು, ದೀಪಗಳು ಹೀಗೆ ಎಲ್ಲವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಸುತ್ತು ಪಡಿಪು ಮನೆಯಾದ ಇದರಲ್ಲಿ ಮದ್ಯದಲ್ಲಿ ಅಂಗಳವಿದೆ. ಮಾಳಿಗೆಯಲ್ಲಿ ಉಪ್ಪಿನಕಾಯಿ ಸಂಗ್ರಹ ಕೋಣೆ, ಭತ್ತ ಸಂಗ್ರಹ ಕೋಣೆ, ಹಿಂದೆ ಗುತ್ತು ಮನೆಯಲ್ಲಿ ಬೆಳ್ಳಿ ಆಭರಣ ತಯಾರಿಕಾ ಕೋಣೆ, ಆಚಾರಿ ಕೋಣೆ, ದೇವರ ಕೋಣೆ, ದೈವಗಳ ಆಭರಣ ಕೋಣೆ ಹೀಗೆ ೧೭ ಕೋಣೆಗಳಿವೆ. ಮನೆಯ ಒಂದು ಪಾರ್ಶ್ವ ಗ್ಲಾಸ್ ಹೌಸ್ ಮಾದರಿಯಲ್ಲಿದೆ. ಚಾವಡಿಯಲ್ಲಿ ಮರದ ಕೆತ್ತನೆಗಳು, ಬಾಗಿಲಿಗೆ ಆಕರ್ಷಕ ಕೆತ್ತನೆ ಇದೆ.
ಮನೆಯ ಎದುರಲ್ಲಿ ಕೆಳಗಡೆ ದೈವಸ್ಥಾನವಿದೆ. ಸಾರಾಮಾಕಾಳಿ, ಮೈಸಾಂದಾಯ, ಕಲ್ಕುಡ, ಕಲ್ಲುರ್ಟಿ, ವರ್ಮಳ್ದಾಯ ದೈವಗಲಿಗೆ ಪ್ರತಿವರ್ಷ ನೇಮೋತ್ಸವ ನಡೆಯುತ್ತಿದೆ. ಎದುರಲ್ಲಿ ಭತ್ತದ ಗದ್ದೆ ಇದ್ದು, ಕಾರ್ಮಿಕರ ಕೊರತೆಯ ನಡುವೆಯೂ ಇಂದಿಗೂ ಭತ್ತ ಬೇಸಾಯವನ್ನು ಮಾಡುತ್ತಾ ಬಂದಿದ್ದಾರೆ. ಅಂತೂ ಆಧುನಿಕತೆಯ ಭರಾಟೆಯಲ್ಲಿ ಹೊಸತನವನ್ನು ಕಾಣುವ ಹುಮ್ಮಸಿನಲ್ಲಿ ಹಳೆಯದನ್ನು ಉಳಿಸಿಕೊಂಡುರುವ ರತನ್ ಕುಮಾರ್ ಜೈನ್ ಅವರ ಮನೆ ಹಿಂದಿನ ವೈಭವಕ್ಕೆ ಸಾಕ್ಷಿಯಾಗಿದೆ.