ನವದೆಹಲಿ : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶದ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ವ್ಯಾಪ್ತಿಯಿಂದ ಈ ವರ್ಷದ ಮಟ್ಟಿಗೆ ರಾಜ್ಯಗಳನ್ನು ಹೊರಗಿಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ.
ಸುಗ್ರೀವಾಜ್ಞೆ ಹೊರಡಿಸುವ ಅಗತ್ಯತೆ ಬಗ್ಗೆ ವಿವರಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಇನ್ನಷ್ಟು ಮಾಹಿತಿ ಕೊಡುವಂತೆ ಕೋರಿದ್ದರು.
ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರಪತಿಯವರೊಂದಿಗೆ ಮಾತುಕತೆ ನಡೆಸಿದ ಸಚಿವರು, ರಾಜ್ಯಗಳ ಪ್ರವೇಶ ಪರೀಕ್ಷೆಗಷ್ಟೇ ವಿದ್ಯಾರ್ಥಿಗಳು ತಯಾರಾಗಿರುವುದರಿಂದ ನೀಟ್ ಗೆ ಸಿದ್ದತೆ ನಡೆಸಿಲ್ಲ, ಪಠ್ಯಕ್ರಮದಲ್ಲಿನ ವ್ಯತ್ಯಾಸ, ಭಾಷಾ ಸಮಸ್ಯೆ ಮುಂತಾದ ವಿಚಾರಗಳನ್ನು ನಡ್ಡಾ ವಿವರಿಸಿದರು ಎನ್ನಲಾಗಿದೆ.
ಆ ನಿಟ್ಟಿನಲ್ಲಿ ಇಂದು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅಂಕಿತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ನೀಟ್ ಕಡ್ಡಾಯ ಮಾಡಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಈ ವರ್ಷದ ಮಟ್ಟಿಗೆ ಮುಂದೂಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಹೊರಡಿಸಲು ಶಿಫಾರಸು ಮಾಡಿತ್ತು.