BW News Bureau : ಸುಗ್ರೀವಾಜ್ಞೆ ಮೂಲಕ ಬಿಬಿಎಂಪಿಯನ್ನು ವಿಭಜಿಸಲು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಆಡಳಿತಾತ್ಮಕ ದೃಷ್ಟಿಯಿಂದ ಮೂರು ಭಾಗ ಮಾಡುವುದು ಖಚಿತ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಮ್ಗಳೂರಿನಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವಿಭಜನೆ ಮಾಡುವ ಕುರಿತು ಹಿರಿಯ ಐ.ಎ.ಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಮಧ್ಯಂತರ ವರದಿ ನೀಡಿದ್ದು, ಬೆಂಗಳೂರನ್ನು ಮೂರು-ನಾಲ್ಕು ಭಾಗಗಳಾಗಿ ಮಾಡುವುದು ಸೂಕ್ತ ಎಂದು ಶಿಫಾರಸು ಮಾಡಿದೆ ಎಂದರು.
ಇದಕ್ಕೆ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಯನ್ನು ವಿಭಜಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಬೆಂಗಳೂರು ವಿಭಜನೆಯನ್ನು ಸುಗ್ರೀವಾಜ್ಞೆ ಮೂಲಕ ಮಾಡಲು ಚರ್ಚೆ ನಡೆದಿತ್ತು. ಆದರೆ, ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಹೈಕೋರ್ಟ್ ನಿರ್ದೇಶನದಂತೆ ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಈ ಮಧ್ಯೆ ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೂ ಸರ್ಕಾರ ಚುನಾವಣೆಗೆ ಬದ್ಧವಾಗಿದೆ ಎಂದರು. ಬಿಬಿಎಂಪಿ ವಿಭಜನೆ ಮೊದಲೋ, ಚುನಾವಣೆ ಮೊದಲೋ ಎಂಬುದಕ್ಕೆ ಸಚಿವರಿಂದ ನಿರುತ್ತರ. ಖಾಸಗಿ ವ್ಯಕ್ತಿಗಳು ಚುನಾವಣೆ ಮುಂದೂಡುವಂತೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಿಬಿಎಂಪಿಯನ್ನು ಸುಗ್ರೀವಾಜ್ಞೆ ಮೂಲಕ ವಿಭಜನೆ ಮಾಡುವ ಸಂಬಂಧ ರಾಜ್ಯಪಾಲರಿಗೆ ವರದಿ ಕಳುಹಿಸಲಾಗಿದೆ ಎಂಬುದು ಆಧಾರರಹಿತ ಎಂದು ಜಯಚಂದ್ರ ಸ್ಪಷ್ಟಪಡಿಸಿದರು.