ಬೆಂಗಳೂರು : ತುಮಕೂರಿನ ವಸಂತ ನರಸಾಪುರದಲ್ಲಿ ಸಮಗ್ರ ಆಧುನಿಕ ಉಪಕರಣಾಗಾರೋದ್ಯಾನ ( ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ) ನಿರ್ಮಾಣಕ್ಕೆ ವಿಶೇಷ ಉದ್ದೇಶ ವಾಹಕ ( ಸ್ಪೆಷಲ್ ಪರ್ಪಸ್ ವೆಹಿಕಲ್ ) ರಚನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ನ್ನು ಪ್ರಾರಂಭಿಸಲು 421 ಕೋಟಿ ರೂ ವೆಚ್ಚವಾಗಲಿದೆ ಎಂದರು.
ಇದರಿಂದ ಸುಮಾರು ನಾಲ್ಕು ಸಾವಿರ ಮಂದಿಗೆ ನೇರ ಉದ್ಯೋಗ ದೊರೆಯಲಿದೆ. ಈ ವಿಶೇಷ ಉದ್ದೇಶ ವಾಹಕವನ್ನು ಚನ್ನೈ-ಬೆಂಗಳೂರು ಮತ್ತು ಚಿತ್ರದುರ್ಗದವರೆಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಇನ್ನು ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಕೆ ಯೋಜನೆಗೆ 32.22 ಕೋಟಿ ರೂ ವಿನಿಯೋಗಿಸಲು ಸಂಪುಟ ಸಮ್ಮತಿ ಸೂಚಿಸಿದೆ ಎಂದು ಹೇಳಿದರು
ಅಬುಧಾಬಿಯಲ್ಲಿರುವ ಬಿ. ಆರ್. ಶೆಟ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಮೂರು ಸರ್ಕಾರಿ ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಿ, ಮೂವತ್ತು ವರ್ಷಗಳ ಗುತ್ತಿಗೆಯ ನಂತರ ಸರ್ಕಾರಕ್ಕೆ ಹಿಂದಿರುಗಿಸುವ ಯೋಜನೆಗೆ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.
ಈ ಸಂಸ್ಥೆಯು 400 ಕೋಟಿ ರೂ ಬಂಡಾವಳ ಹೂಡಿ, ಯಾವುದೇ ಲಾಭಾಪೇಕ್ಷೆ ಇಲ್ಲದೆ ಕಡುಬಡವರ ಆರೋಗ್ಯಕ್ಕಾಗಿ ಶ್ರಮಿಸಲಿದೆ. ಈ ಆಸ್ಪತ್ರೆಗಳ ಸಂಪೂರ್ಣ ಮೇಲ್ವಿಚಾರಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ವಹಿಸಲಿದ್ದಾರೆ. ಅಲ್ಲದೆ, ಸಂಸ್ಥೆಗೆ ಜವಾಬ್ದಾರಿ ವಹಿಸುವ ಮುನ್ನ, ಕಾನೂನು, ಆರೋಗ್ಯ ಹಾಗೂ ಹಣಕಾಸು ಇಲಾಖೆಗಳು ಒಡಂಬಡಿಕೆಗೆ ಸಹಿ ಹಾಕಲಿವೆ ಎಂದು ಸಚಿವರು ತಿಳಿಸಿದರು.