Sullia : ಮಗುವಿನಲ್ಲಿ ತಾನು ತಿಳಿದುಕೊಂಡದ್ದನ್ನು, ತನಗೆ ಅನಿಸಿದ್ದನ್ನು ಮತ್ತು ತನ್ನ ಆಲೋಚನೆಗಳನ್ನು ಹೇಳುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣ. ಇದಕ್ಕೆ ಭಾಷಾ ಕೌಶಲ್ಯವೂ ಬೇಕು, ಹಾಗೆಯೇ ಅವಕಾಶವೂ ಬೇಕು. ಇಂತಹ ಅಭಿವ್ಯಕ್ತಿಯ ಅವಕಾಶವನ್ನು ನಾಲ್ಕು ಗೋಡೆಗಳ ಹೊರಗೆ ಮುಕ್ತ ಪರಿಸರದಲ್ಲಿ ಒದಗಿಸುವುದೇ ಬೇಸಿಗೆ ಶಿಬಿರದ ಉದ್ದೇಶ ಸುಳ್ಯದ ಖ್ಯಾತ ದಂತವೈದ್ಯೆ ಡಾ.ವಿದ್ಯಾ ಶ್ರೀಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯದ ಸ್ನೆಹ ಶಾಲೆಯಲ್ಲಿ ನಡೆದ ಮಕ್ಕಳ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡಲಾಗದ ಅನೇಕ ಕೌಶಲ್ಯಗಳು, ಸಂಸ್ಕಾರಗಳು ಮತ್ತು ಸಮಾನ ವಯಸ್ಕರೊಡನೆ ಒಡನಾಟದ ಅವಕಾಶಗಳು ಇಂತಹ ಶಿಬಿರಗಳಲ್ಲಿ ಸಿಗುತ್ತವೆ. ಸ್ನೇಹ ಶಾಲೆಯಲ್ಲಿ ನಡೆದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನದ ಉದ್ದೇಶವು ಸಫಲವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತಾಡಿದ ಡಾ. ವಿದ್ಯಾಶಾಂಭವ ಪಾರೆಯವರು ಮುಕ್ತತೆಯ ಬಯಕೆ ಜೀವ ಸಹಜ ಲಕ್ಷಣ. ವರ್ಷ ಪೂರ್ತಿ ನಾಲ್ಕು ಗೋಡೆಗಳ ನಡುವೆ ಕಳೆವ ಮಕ್ಕಳಿಗೆ ಬೇಸಿಗೆ ಶಿಬಿರವು ತುಂಬಾ ಉಪಯುಕ್ತ ಎಂದು ಹೇಳಿದರು.
ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತಾಡಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳಲ್ಲೇ ಪರಸ್ಪರ ಮೌಲ್ಯಮಾಪನ ನಡೆಯುತ್ತದೆ. ಅದು ಅವರ ಸ್ವಚಿಂತನೆ ಮತ್ತು ಸ್ವಾವಲಂಬನೆಗೆ ಸಹಾಯಕವಾಗುತ್ತದೆ ಎಂದರು. ಶಿಬಿರಾರ್ಥಿಗಳಾದ ಅಚಿಂತ್ಯ ಕೃಷ್ಣ ಬೆಂಗಳೂರು, ಶ್ರೀಶ ಅರಂಬೂರು ಮತ್ತು ಮಂಜುನಾಥ ಕುಡೇಕಲ್ಲು ಶಿಬಿರದ ಅನುಭವಗಳನ್ನು ಹೇಳಿದರು.
ಇದೇ ಎಪ್ರಿಲ್ ಒಂದರಿಂದ ಏಳು ದಿನಗಳಲ್ಲಿ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನಾಲೂ ಯೋಗ, ಧ್ಯಾನ, ಬೌದ್ಧಿಕ ಚಿಂತನೆ, ಚಿತ್ರಕಲೆ, ಕ್ರಾಫ್ಟ್, ಹಾಡು, ನೃತ್ಯ, ಕೋಲಾಟ, ಭಜನೆ, ಫಿಲಂಶೋ, ನಾಟಕ, ಹೊರ ಸಂಚಾರ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದರು.
ಪ್ರಾರಂಭದಲ್ಲಿ ಮಕ್ಕಳು ಶಿಬಿರ ಗೀತೆಯನ್ನು ಹಾಡಿದ ಬಳಿಕ ಶಿಬಿರದ ಸಂಚಾಲಕರಾದ ಪ್ರಸನ್ನ ಐವರ್ನಾಡು ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ವಂದನಾರ್ಪಣೆ ಮಾಡಿದರು. ಬಳಿಕ ಶಿಬಿರಾರ್ಥಿಗಳಿಂದ ಹಾಡು, ನೃತ್ಯ ಹಾಗೂ ನಾಟಕಗಳು ಜರಗಿದುವು.