ಬೆಂಗಳೂರು : ಶಾಲೆಗಳಿಗೆ ಯೋಗ ಗುರುಗಳನ್ನು ನೇಮಿಸಿ ವೈಜ್ಞಾನಿಕವಾಗಿ ಯೋಗ ಶಿಕ್ಷಣ ನೀಡುವಂತಾಗಬೇಕು. ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ, ದೈಹಿಕ ಸಮತೋಲನ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವುದು ಅವಶ್ಯಕ, ಯೋಗಕ್ಕೆ ಜಾತಿ ಧರ್ಮ, ವಯಸ್ಸಿನ ಸೀಮಿತವಿಲ್ಲ ಎಂದರು.
ವಿಶ್ವ ಸಂಸ್ಥೆಯೇ ಜೂನ್ 21 ರಂದು ಯೋಗ ದಿನವನ್ನಾಗಿ ಆಚರಿಸಲು ನಿರ್ಣಯಿಸಿರುವುದು ಸ್ವಾಗತಾರ್ಹ, ಯೋಗ ಭಾರತೀಯ ಸಂಸ್ಕತಿಯಲ್ಲಿ ಋಷಿ ಮುನಿಗಳು ಸಮಾಜಕ್ಕೆ ನೀಡಿರುವಂತಹ ಒಂದು ಕೊಡುಗೆ ಎಂದರು.
ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆ ಹಾಗೂ ಆಯುಶ್ ಇಲಾಖೆಗಳ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ. ಶಾಲೆಗಳಲ್ಲಿ ಹಂತ ಹಂತವಾಗಿ ಕಡ್ಡಾಯವಾಗಿ ಯೋಗ ಶಿಕ್ಷಣ ನೀಡಬೇಕು. ಶಾಲೆಗಳಿಗೆ ಯೋಗ ಗುರುಗಳನ್ನು ನೇಮಿಸಿ ವೈಜ್ಞಾನಿಕವಾಗಿ ಯೋಗ ಶಿಕ್ಷಣ ನೀಡುವಂತಾಗಬೇಕು. ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಹೇಳಿದರು.
ಯೋಗದ ಮೂಲಕ ಮಧುಮೇಹ ಮತ್ತಿತರ ರೋಗಗಳನ್ನು ನಿಯಂತ್ರಿಸುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ. ಸರ್ಕಾರ ಇಡೀ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಎಲ್ಲಾ ಅಗತ್ಯ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.