ಬೆಂಗಳೂರು : ಧರ್ಮ ಹಾಗೂ ಜಾತಿ ರಹಿತವಾದ ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆ ಸಾಧ್ಯವಿದೆ. ಯೋಗ ಶಿಕ್ಷಣವನ್ನು ಶಾಲಾ ಪಠ್ಯಕ್ರಮದಲ್ಲಿ ಐಚ್ಛಿಕ ವಿಷಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಧಾನಸೌಧದ ಎದುರು ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಹ ಮತ್ತು ಮನಸ್ಸುಗಳ ಒತ್ತಡ ಮುಕ್ತವಾಗಿರಬೇಕಾದರೆ ಯೋಗಾಸನ ರಾಮಬಾಣ. ದಿನದ 24 ಗಂಟೆಯಲ್ಲಿ ಯೋಗಾಸನಕ್ಕಾಗಿ ಒಂದು ಗಂಟೆ ಮೀಸಲಿಟ್ಟರೆ ಬದುಕಿರುವಷ್ಟು ದಿನವೂ ಆರೋಗ್ಯವಂತರಾಗಿರಬಹುದು ಎಂದರು.
ಯೋಗ ಶಿಕ್ಷಣವನ್ನು ಪಠ್ಯ ಕ್ರಮಗಳಲ್ಲಿ ಅಳವಡಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಆಯುಷ್ ಇಲಾಖೆ ಈಗಾಗಲೇ 12 ಸಾವಿರ ಶಿಕ್ಷಕರಿಗೆ ಅನೌಪಚಾರಿಕವಾಗಿ ಯೋಗ ತರಬೇತಿ ನೀಡಿದೆ. ಅದನ್ನು ಕ್ರಮಬದ್ಧಗೊಳಿಸಲು ಶಾಲಾ ಪಠ್ಯ ಕ್ರಮದಲ್ಲಿ ಯೋಗವನ್ನು ಅಳವಡಿಸಲು ಆಯುಷ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಮೈಸೂರಿನಲ್ಲಿ ಯೋಗ ಶಿಕ್ಷಣದಲ್ಲಿ ಪದವಿ ನೀಡುವ ಕೋರ್ಸ್ ಲಭ್ಯವಿದೆ. ಅದನ್ನು ಮೇಲ್ದರ್ಜೆಗೇರಿಸಿ ಯೋಗ ಸ್ನಾತಕೋತ್ತರ ಪದವಿ ಆರಂಭಿಸುವ ಚಿಂತನೆಗಳು ನಡೆದಿವೆ. ಜಿಗಣಿಯಲ್ಲಿರುವ ದೇಶದ ಮೊದಲ ವಿವೇಕಾನಂದ ಯೋಗ ಅನುಸಂಧಾನ ವಿವಿಗೆ ರಾಜ್ಯ ಸರ್ಕಾರ ಸಂಪೂರ್ಣ ನೆರವು ನೀಡುತ್ತಿದೆ ಎಂದು ತಿಳಿಸಿದರು.