Mangalore : ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ’ಸೌರಮಾನ ಯುಗಾದಿ’ ಅಥವಾ ’ವಿಷು’ ಹಬ್ಬದ ಅಂಗವಾಗಿ ಆಯೋಜಿಸಿದ್ದ ’ವಿಷು ವಿಶೇಷ ಸ್ಪರ್ಧೆ - 2016’ರ ಫಲಿತಾಂಶ ಪ್ರಕಟಗೊಂಡಿದೆ.
ಪ್ರಬಂಧ, ಕಥೆ, ಕವಿತೆ, ನಗೆ ಬರಹ ಮತ್ತು ಕಾರ್ಟೂನು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಮೇ 14, 2016 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಡಾ| ಹರಿಕೃಷ್ಣ ಭರಣ್ಯ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾನ್ ಜಗದೀಶ ಶರ್ಮಾ ಸಂಪ, ನಾರಾಯಣ ಬಾಳಿಲ, ರಾಘವಯ್ಯ ಮುಳಿಯ, ರಾಘವೇಂದ್ರ ಹೆಗಡೆ ಕಡ್ನಮನೆ, ಮಧುಕೇಶ ದೊಡ್ಡೇರಿ, ಪುಂಡಿಕಾಯಿ ನಾರಾಯಣ ಭಟ್, ಭಾಗ್ಯಲಕ್ಷ್ಮಿ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಫಲಿತಾಂಶದ ವಿವರ:
1. ಪ್ರಬಂಧ: ಪ್ರಥಮ: ರೇಖಾ ಶ್ರೀನಿವಾಸ್ ಮುನಿಯೂರು, ದ್ವಿತೀಯ: ಶ್ರೀಲತಾ ಹರೀಶ್, ಕುಂಬಳೆ
2. ಕಥೆ: ಪ್ರಥಮ: ಸುರೇಶ್ ಬೆಳ್ತಂಗಡಿ, ದ್ವಿತೀಯ: ವಿಜಯಲಕ್ಷ್ಮಿ ಕಟ್ಟದಮೂಲೆ
3. ಕವನ: ಪ್ರಥಮ: ಸರಸ ಬಿ. ಕೃಷ್ಣ ಕಮ್ಮರಡಿ, ದ್ವಿತೀಯ: ಎಸ್.ಕೆ.ಗೋಪಾಲಕೃಷ್ಣ ಭಟ್
4. ನಗೆ ಬರಹ: ಪ್ರಥಮ: ಪೂರ್ಣಿಮಾ ಸಣ್ಣಕೇರಿ, ದ್ವಿತೀಯ: ಶೀಲಾಲಕ್ಷ್ಮಿ ವರ್ಮುಡಿ
5. ಕಾರ್ಟೂನು: ಪ್ರಥಮ: ವೆಂಕಟ್ ಕೋಟೂರ್, ದ್ವಿತೀಯ: ಶ್ಯಾಮಸುಂದರ್ ನೆತ್ರಕೆರೆ
ವಿಶೇಷ ಬಹುಮಾನ : ಸವಿತಾ ಎಸ್. ಭಟ್ ಅಡ್ವಾಯಿ
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)
ಆಧುನಿಕ ಅಂತರ್ಜಾಲದ ಮೂಲಕ ಪ್ರಕಟಗೊಂಡು, ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಗೆ ಬೃಹದ್ವೇದಿಕೆಯಾಗಿ ರೂಪುಗೊಂಡ ಸಾಹಿತ್ಯ ಬಳಗ ಒಪ್ಪಣ್ಣ-ನೆರೆಕರೆ. ಎಲ್ಲ ಆಸಕ್ತರಿಗೂ ಮುಕ್ತ ಪ್ರವೇಶವನ್ನಿತ್ತು ಬರೆಯಲು-ಬೆರೆಯಲು ಪ್ರೇರೇಪಿಸುತ್ತಾ, ಇದೀಗ ಏಳುನೂರಕ್ಕೂ ಹೆಚ್ಚು ಲೇಖಕರ - ಐದು ಸಾವಿರಕ್ಕೂ ಅಧಿಕ ಲೇಖನಗಳನ್ನು ಹೊಂದಿದ್ದು, ದಿನೇದಿನೇ ಬೆಳೆಯುತ್ತಿದೆ.
ಅಕ್ಷರಯಜ್ಞದ ಮೂಲಕ ಸಾಹಿತ್ಯ ಸೇವೆಗೈಯುತ್ತಿರುವ ಈ ಬಳಗವನ್ನು ನಮ್ಮ ಹಳ್ಳಿಜೀವನವನ್ನು ನೆನಪಿಸುವಂತೆ ಬೈಲು ಎಂದು ಕರೆಯುವುದು ರೂಢಿ. ಈ ಬೈಲು ಸಮಾಜವನ್ನು ತಲುಪುವ ಉದ್ದೇಶದಿಂದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಆ ಮೂಲಕ ಸಾಹಿತ್ಯ ಪ್ರಕಟಣೆಗಳು, ಲಲಿತಕಲೆಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಧನಸಹಾಯ, ಸನಾತನ ಜೀವಿಕೆಯ ಪ್ರಸಾರ, ಪ್ರಚಾರ-ಇತ್ಯಾದಿ ಕೈಂಕರ್ಯಗಳನ್ನು ಮಾಡುತ್ತಾ ಬಂದಿದೆ.
ಪ್ರತಿಷ್ಠಾನದ ಧ್ಯೇಯೋದ್ದೇಶಗಳಲ್ಲೊಂದಾದ ಲಲಿತಕಲೆ ಸಂಚಾಲಕತ್ವದಲ್ಲಿ 2013ರಲ್ಲಿ ಅಷ್ಟಾವಧಾನ ಕಾರ್ಯಕ್ರಮ, 2014ರಲ್ಲಿ ಕಾವ್ಯ-ಗಾನ-ಯಾನ ಎಂಬ ವಿನೂತನ ಕಾರ್ಯಕ್ರಮ ಮತ್ತು 2015ರಲ್ಲಿ ಯಕ್ಷಗಾನವನ್ನು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಭೂತಪೂರ್ವವಾಗಿ ಆಯೋಜಿಸಿತ್ತು. ಪ್ರತಿಷ್ಠಾನವು ಹವ್ಯಕ ಭಾಷಾ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿದ್ವಾ೦ಸರಿಗೆ ದಿ.ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿಯನ್ನು 2015ರಿ೦ದ ಆಯೋಜಿಸುತ್ತಾ ಬ೦ದಿದೆ.