ನವದೆಹಲಿ : ಏಪ್ರಿಲ್ 1ರಿಂದ ಆರಂಭವಾಗಲಿರುವ 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು ರಾಷ್ಟ್ರೀಯ ಜಿಡಿಪಿ ಶೇಕಡಾ 7ರಿಂದ 7.5ರಷ್ಟು ಬೆಳವಣಿಗೆಯಾಗಲಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯು ಹೇಳಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ 2016-17ರ ಸಾಲಿನ ಮುಂಗಡಪತ್ರವನ್ನು ಮಂಡಿಸಲಿದ್ದು ಅದಕ್ಕೂ ಮುನ್ನ ಶುಕ್ರವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಲಾಗಿದೆ. 2017ರವರೆಗಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7ರಿಂದ 7.75ರಷ್ಟು ಬೆಳವಣಿಗೆಯಾಗಲಿದೆ ಎಂದು ವರದಿ ನಿರೀಕ್ಷಿಸಿದೆ.
ಜೇಟ್ಲಿ ಅವರ ಮುಂದಿನ ವರ್ಷದ ಮುಂಗಡಪತ್ರಕ್ಕೆ ಆಧಾರವಾಗಿರುವ ಆರ್ಥಿಕ ಸಮೀಕ್ಷೆಯ ಪ್ರಕಾರ ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ಶೇಕಡಾ 8ರ ಬೆಳವಣಿಗೆಯನ್ನು ಸಾಧಿಸಲಿದೆ. ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ಆರ್ಥಿಕ ಸಮೀಕ್ಷೆಯನ್ನು ತಯಾರಿಸಿದ್ದಾರೆ.
7ನೇ ವೇತನ ಆಯೋಗವು ಶಿಫಾರಸು ಮಾಡಿದ ವೇತನ ಹೆಚ್ಚಳದಿಂದ ಬೆಲೆಗಳಲ್ಲಿ ಅಸ್ಥಿರತೆಯಾಗದು, ಹಣದುಬ್ಬರದ ಮೇಲೆ ಪರಿಣಾಮ ಕಡಿಮೆ. ಅಸಾಮಾನ್ಯ ಸವಾಲು ಹಾಗೂ ದುರ್ಬಲ ಬಾಹ್ಯ ಪರಿಸರವು ಮುಂಬರುವ ಮುಂಗಡಪತ್ರ ಮತ್ತು ಆರ್ಥಿಕ ನೀತಿಯಿಂದ ಸುಧಾರಿಸಬಲ್ಲುದು ಎಂದು ಸಮೀಕ್ಷೆ ಹೇಳಿದೆ. 2015-16ರಲ್ಲಿ ಆರ್ಥಿಕ ಬೆಳವಣಿಗೆ ದರ ಶೇಕಡಾ 7.6ರಷ್ಟು ಇರಲಿದ್ದು, ಸರ್ಕಾರವು ಜಿಡಿಪಿಯ ಶೇಕಡಾ 3.9 ರ ಗುರಿಯ ತನ್ನ ಆರ್ಥಿಕ ಕೊರತೆಯನ್ನು ನೀಗಿಸಿಕೊಳ್ಳುವುದು ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.
ಸಮೀಕ್ಷೆಯ ಮುಖ್ಯಾಂಶಗಳು ಹೀಗಿವೆ:
* 2015-16 ಕಂಡಿರುವ ಹಣಕಾಸು ಕೊರತೆ ಜಿಡಿಪಿಯ ಶೇಕಡಾ 3.9, ಇದನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಬಹುದು.
* ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರುವ 2016-17ರಲ್ಲಿ ಶೇಕಡಾ 4.5ರಿಂದ ಶೇಕಡಾ 5ರಷ್ಟು ಇರುವ ನಿರೀಕ್ಷೆ.
*ಆರ್ಬಿಐಯು 2017ರ ಮಾರ್ಚ್ ವೇಳೆಗೆ ಶೇಕಡಾ 5ರಷ್ಟು ಹಣದುಬ್ಬರವನ್ನು ನೀಗಿಸುವ ನಿರೀಕ್ಷೆ ಹೊಂದಿದೆ.
* ಕನಿಷ್ಠ ಹಣದುಬ್ಬರವು ಹಿಡಿತಕ್ಕೆ ಬಂದಿದೆ, ಬೆಲೆ ಸ್ಥಿರತೆಯಲ್ಲಿ ವಿಶ್ವಾಸ ಸುಧಾರಿಸಿದೆ.
* 2016-17ರ ಕರೆಂಟ್ ಅಕೌಂಟ್ ಕೊರತೆಯು ಜಿಡಿಪಿಯ ಶೇಕಡಾ 1ರಿಂದ 1.5ರಷ್ಟು ಇರುವ ನಿರೀಕ್ಷೆ.
* ಆದಾಯ ಗಳಿಸುವ ವ್ಯಕ್ತಿಗಳ ತೆರಿಗೆ ಜಾಲವನ್ನು ಶೇಕಡಾ 5.5ರಿಂದ ಶೇಕಡಾ 20ಕ್ಕೆ ವಿಸ್ತರಿಸುವ ಪ್ರಸ್ತಾಪ.
* ತೆರಿಗೆ ಆದಾಯ 2016-16ರ ಹಣಕಾಸು ವರ್ಷದ ಬಜೆಟ್ ಗುರಿ ಮೀರುವ ನಿರೀಕ್ಷೆ.
*2018-19ರ ಸಾಲಿಗೆ ಬ್ಯಾಂಕುಗಳ ಅಂದಾಜು ಬಂಡವಾಳ ಆವಶ್ಯಕತೆ 1.8 ಟ್ರಿಲಿಯನ್ (1800 ಕೋಟಿ) ರೂಪಾಯಿಗಳು.
* ಕಾರ್ಪೊರೇಟ್, ಬ್ಯಾಂಕ್ ಬ್ಯಾಲೆನ್ಸ್ ಷೀಟ್ ವಿಸ್ತರಣೆ ಸಾಧ್ಯತೆ ಪರಿಣಾಮವಾಗಿ ಖಾಸಗಿ ಹೂಡಿಕೆಗಳ ಪುನಶ್ಚೇತನ ಸಾಧ್ಯತೆ.
* ಒತ್ತಡ ಇರುವ ಕಾರ್ಪೊರೇಟ್ ರಂಗದ ಆಸ್ತಿಪಾಸ್ತಿ ಮಾರಾಟ ಅಥವಾ ಮರುವಸತಿ ಅಗತ್ಯತೆ.
* ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಬಂಡವಾಳ ಹೆಚ್ಚಿಸಲು ಸರ್ಕಾರ ಕೆಲವು ವೆಚ್ಚ ಇಳಿಸಬೇಕಾಗಬಹುದು.
* ಮುಂಗಡಪತ್ರ ಅನುಮೋದನೆ ಮೂಲಕ ಬ್ಯಾಂಕಿಂಗ್ಗೆ 700 ಬಿಲಿಯನ್ (70000 ಕೋಟಿ) ರೂಪಾಯಿ ಒದಗಿಸಲು ಸರ್ಕಾರದ ಪ್ರಸ್ತಾವ.