ನವದೆಹಲಿ : 2015-16 ನೇ ಹಣಕಾಸು ವರ್ಷದಲ್ಲಿ ದಾಖಲೆ 7008 ಹಳ್ಳಿಗಳಿಗೆ ವಿದ್ಯುತ್ ನೀಡಲಾಗಿದ್ದು, ಇದು ಅವಧಿಗೂ ಮುನ್ನ ಸಾಧಿಸಿದ ಗುರಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಈ ಮೂಲಕ ವರ್ಷ ಮುಗಿಯುವ ಒಂದು ವಾರ ಮೊದಲೇ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ವರ್ಷದ ಗುರಿಯಾದ 7000 ಹಳ್ಳಿಗಳಿಗೆ ವಿದ್ಯುದ್ದೀಕರಣದ ಗುರಿ ತಲುಪಿದಂತಾಗಿದೆ.
ಈ ಮೈಲಿಗಲ್ಲನ್ನು ಸಾಧಿಸಿದ ವಿದ್ಯುತ್, ಕಲ್ಲಿದ್ದಲು ಮತ್ತು ಹೊಸ & ನವೀಕರಿಸಬಹುದಾದ ಶಕ್ತಿಯ ರಾಜ್ಯ ಸಚಿವ ಪಿಯೂಷ್ ಗೋಯಲ್, ಹಳ್ಳಿಯ ಒಂದು ಸಣ್ಣ ಹೆಜ್ಜೆ, ಭಾರತದ ದೈತ್ಯ ಹೆಜ್ಜೆ. ವರ್ಷದ 7000 ಹಳ್ಳಿಗಳ ವಿದ್ಯುದ್ದೀಕರಣದ ಗುರಿಯನ್ನು ಸಾಧಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಗ್ರಾಮ ವಿದ್ಯುದೀಕರಣ ಕಾರ್ಯಕ್ರಮದಲ್ಲಿ ಈ ಬೆಳವಣಿಗೆಗಳು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಲ್ಲಿ ಸಾಧ್ಯವಾಯಿತು ಎಂದೂ ಟ್ವೀಟ್ ನಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣದಲ್ಲಿ ಹೇಳಿದಂತೆ, 18,452 ವಿದ್ಯುತ್ ಇಲ್ಲದ ಹಳ್ಳಿಗಳಿಗೆ 1000 ದಿನಗಳಲ್ಲಿ ವಿದ್ಯುತ್ ಒದಗಿಸುವ ಯೋಜನೆಯನ್ನು ಸರ್ಕಾರ ನಿರ್ಧರಿಸಿತು. ಅದರಂತೆ ಹಲವು ಮೈಲಿಗಲ್ಲುಗಳ ಮೂಲಕ ಅದನ್ನು ಸಾಧಿಸುವ ಗುರಿ ಹೊಂದಲಾಯಿತು.