ಐಜ್ವಾಲ್ : ನಾನು ದನದ ಮಾಂಸ ತಿನ್ನುತ್ತೇನೆ; ನನ್ನನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ ಎಂದು ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಕಿರಣ್ ರಿಜಿಜು ಪ್ರಶ್ನಿಸಿದ್ದಾರೆ.
ಗೋಮಾಂಸ ತಿನ್ನದೇ ಬದುಕಲು ಸಾಧ್ಯವಿಲ್ಲ ಎಂದು ಹೇಳುವವರು ಪಾಕಿಸ್ಥಾನಕ್ಕೆ ಹೋಗಲಿ ಎಂದು ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಖಂಡನೆಗೆ ಗುರಿಯಾಗಿದ್ದ ಬಿಜೆಪಿಯ ನಾಯಕ, ರಾಜ್ಯ ಸಭಾ ಸದಸ್ಯ ಮುಖ್ತಾರ್ ಅಬ್ಟಾಸ್ ನಕ್ವಿ ಅವರ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿರುವ ರಿಜಿಜು ಅವರು, ನಕ್ವಿ ಅವರ ಹೇಳಿಕೆಯನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.
ಮಿಝೋರಾಂ ರಾಜಧಾನಿ ಐಜ್ವಾಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ನಾನು ಗೋಮಾಂಸ ತಿನ್ನುತ್ತೇನೆ. ಏಕೆಂದರೆ ಅದು ನಮ್ಮ ದೇಶದ ಈಶಾನ್ಯ ಭಾಗದ ಜನರ ಆಹಾರ ಪದ್ಧತಿಯಲ್ಲಿ ಮುಖ್ಯವಾಗಿದೆ. ನಾವು ಯಾವುದೇ ವ್ಯಕ್ತಿಯ ಆಹಾರ ಕ್ರಮದಲ್ಲಿ ಹಸ್ತಕ್ಷೇಪಕ್ಕೆ ಮುಂದಾಗುವದು ಸರಿಯಲ್ಲ ಎಂದು ತಿಳಿಸಿದ್ದಾರೆ.
ನಮ್ಮದು ಪ್ರಜಾಸತ್ತಾತ್ಮಕ ದೇಶ. ಕೆಲವೊಮ್ಮೆ ಕೆಲವರು ನೀಡುವ ಹೇಳಿಕೆಗಳನ್ನು ಅರಗಿಸಿಕೊಳ್ಳುವುದು ಇತರರಿಗೆ ಸಾಧ್ಯವಾಗುವುದಿಲ್ಲ. ಮಿಝೋ ಕ್ರೈಸ್ತನೊಬ್ಬ ಈ ಭೂಮಿಯು ಕ್ರಿಸ್ತನದ್ದು ಎಂದು ಹೇಳಿದರೆ ಅದರಿಂದ ಪಂಜಾಬ್ ಅಥವಾ ಹರಿಯಾಣದಲ್ಲಿರುವ ಜನರಿಗೆ ಏನು ನಷ್ಟ? ನಾವು ಪ್ರತಿಯೊಂದು ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.