ನವದೆಹಲಿ : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಅ.1 ರಿಂದ 6ರವರೆಗೆ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನಂತೆ ಕರ್ನಾಟಕ ಸರ್ಕಾರ ನೀರು ಹರಿಸಲು ಸಿದ್ಧವಾಗಿದ್ದು, ಈಗಾಗಲೇ 9 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸಿದ್ದವಾಗಿದೆ ಎಂದು ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ತಿಳಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ಸೆಪ್ಟೆಂಬರ್ 30ರ ಆದೇಶ ಮಾರ್ಪಾಡು ಆದೇಶ ಕುರಿತಂತೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭವಾಗಿದ್ದು, ಕರ್ನಾಟಕದ ಪರ ವಕೀಲ ಫಾಲಿ ಎಸ್. ನಾರಿಮನ್ ಅವರು ಸುಪ್ರೀಂ ಆದೇಶ ಪಾಲಿಸುತ್ತಿರುವುದಾಗಿ ಹೇಳಿದರು. ತಮಿಳುನಾಡಿಗೆ 6 ದಿನಗಳ ಕಾಲ ನೀರು ಹರಿಸುತ್ತೇವೆ', 6 ದಿನಗಳಲ್ಲಿ ಒಟ್ಟು 36,000 ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ನಾರಿಮನ್ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಕಳೆದ ರಾತ್ರಿಯಿಂದಲೇ 9,000 ಕ್ಯೂಸೆಕ್ಸ್ ನೀರು ಹರಿದಿದೆ. ಅಕ್ಟೋಬರ್ 6ರೊಳಗೆ ಸುಪ್ರೀಂ ಕೋರ್ಟ್ ಆದೇಶ ಪೂರ್ತಿಯಾಗಿ ಕರ್ನಾಟಕ ಪಾಲಿಸಲಿದೆ ಎಂದು ನಾರಿಮನ್ ತಿಳಿಸಿದರು.
ಇದೇ ವೇಳೆ ನಾವು ನಮ್ಮ ಲೆಕ್ಕಾಚಾರದಂತೆ ಆದೇಶ ನೀಡಿದ್ದೇವೆ ನ್ಯಾಯಾಲಯ ತಿಳಿಸಿದ್ದು, ಅಕ್ಟೋಬರ್ 7ರಿಂದ 18ರವರೆಗೆ ಎಷ್ಟು ನೀರು ಬಿಡುತ್ತೀರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನಾರಿಮನ್ ಅವರು, ನೀರು ಬಿಡುಗಡೆ ಆದೇಶಕ್ಕೆ ಲೆಕ್ಕಾಚಾರವೇ ಮುಖ್ಯವಲ್ಲ. ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಆದೇಶ ನೀಡಬೇಕಿತ್ತು ಎಂದರು.
ಈ ವೇಳೆ ಅಕ್ಟೋಬರ್ 7ರಿಂದ 17ರವರೆಗೆ ಅಧ್ಯಯನ ತಂಡ ಕರ್ನಾಟಕ, ತಮಿಳುನಾಡಿಗೆ ತೆರಳಿ ಅಧ್ಯಯನ ಮಾಡಲಿ, 18ರಂದು ವಿಚಾರಣೆ ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.