ನವದೆಹಲಿ : ನೇತಾಜಿ 'ಸುಭಾಷ್ ಚಂದ್ರ ಬೋಸ್' ವಂಶಸ್ಥರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭಾರತ ರತ್ನ ಪದವಿಯಿಂದ ಮುಕ್ತಗೊಳಿಸಬೇಕಿದೆ ಎಂದು ಬೇಡಿಕೆ ಮುಂದಿಟ್ಟಿದ್ದಾರೆ.
ಸುಭಾಷ್ ಚಂದ್ರ ಬೋಸರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯ ನಂತರ 1948ರಿಂದ 1968ರವರೆಗೆ ಸುಮಾರು 20 ವರ್ಷಗಳ ಕಾಲ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು, ಬೋಸ್ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸಿದ್ದರು ಎಂಬ ಮಾಹಿತಿಯಿಂದ ನೆಹರು ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ನೇತಾಜಿ ವಂಶಸ್ಥರು, ಸ್ವಾತಂತ್ರ್ಯ ಸೇನಾನಿ ನೇತಾಜಿ ಬಗ್ಗೆ ಬೇಹುಗಾರಿಕೆ ನಡೆಸಿದ್ದ ವಿಷಯ ಬಹಿರಂಗವಾದಾಗಿನಿಂದ ನೆಹರು ವ್ಯಕ್ತಿತ್ವ ಬಹಿರಂಗವಾಗಿದೆ. ಭಾರತ ರತ್ನ ಪ್ರಶಸ್ತಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಆದರೆ ನೆಹರು ಅವರ ವ್ಯಕ್ತಿತ್ವ ಭಾರತ ರತ್ನ ಪ್ರಶಸ್ತಿಗೆ ಅನರ್ಹವಾಗಿರುವುದರಿಂದ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕೆಂದು ಚಂದ್ರ ಕುಮಾರ್ ಬೋಸ್ ಆಗ್ರಹಿಸಿದ್ದಾರೆ.
ನೇತಾಜಿ ಸಾವಿನ ನಂತರವೂ ಅವರ ಕುಟುಂಬದ ವಿರುದ್ಧ ನೆಹರು 20 ವರ್ಷಗಳ ಕಾಲ ನಿರಂತರ ಬೇಹುಗಾರಿಕೆ ನಡೆಸಿರುವುದರ ಬಗ್ಗೆ ನೊಂದಿರುವ ಸುಭಾಷ್ ಚಂದ್ರ ಬೋಸ್ ಕುಟುಂಬ ಸದಸ್ಯರು ನೆಹರು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.