ನವದೆಹಲಿ : ದೇಶವಿಡೀ ತೀವ್ರ ಕುತೂಹಲದಿಂದ ಕಾಯುತ್ತಿದ್ದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ರಹಸ್ಯ ಕಡತಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ನೇತಾಜಿಯವರ 119ನೇ ಜನ್ಮದಿನವಾದ ಶನಿವಾರ ಸಾರ್ವಜನಿಕಗೊಳಿಸಿದರು.
ಈ ಕಡತಗಳು ಕಳೆದ 70 ವರ್ಷಗಳಿಂದ ನೇತಾಜಿಯವರ ಸಾವಿನ ಬಗ್ಗೆ ಬೆಳಕು ಚೆಲ್ಲಬಹುದು.
ಕಡತಗಳು ಬಹಿರಂಗಗೊಂಡ ನಂತರ ಮಾತನಾಡಿದ ನೇತಾಜಿಯವರ ಕುಟುಂಬದ ವಕ್ತಾರ ಹಾಗೂ ನೇತಾಜಿಯವರ ಸಂಬಂಧಿ ಚಂದ್ರ ಬೋಸ್, 'ನಾವು ಎಲ್ಲಾ ಕಡತಗಳನ್ನು ಓದಲಾಗಲಿಲ್ಲ, ಆದರೆ ಈವರೆಗೆ ಓದಿರುವ ಕಡತಗಳಿಂದ ನೇತಾಜಿಯವರು ಇದ್ದ ವಿಮಾನ ಪತನವಾಗಿತ್ತು ಎನ್ನುವುದರ ಬಗ್ಗೆ ಕೇವಲ ಸಾಂದರ್ಭಿಕ ಆಧಾರಗಳಿವೆಯೇ ಹೊರತು ನಿರ್ಣಾಯಕವಾದ ಸಾಕ್ಷ್ಯಗಳಿಲ್ಲ' ಎಂದಿದ್ದಾರೆ.
'ಅಲ್ಲದೆ, ಲಾಲ್ ಬಹದ್ದೂರ್ ಶಾಸ್ತ್ರಿ (ಮಾಜಿ ಪ್ರಧಾನಿ)ಯವರು ಸುರೇಶ್ ಬೋಸ್ ಅವರಿಗೆ ಬರೆದ ಪತ್ರವೊಂದರಲ್ಲಿ ಸಹ ವಿಮಾನ ಪತನದ ಬಗ್ಗೆ ಸಾಂದರ್ಭಿಕ ಆಧಾರಗಳಿವೆಯೇ ಹೊರತು ನಿರ್ಣಾಯಕವಾದ ಸಾಕ್ಷ್ಯಗಳಿಲ್ಲ ಎಂದು ಬರೆದಿದ್ದರು' ಎಂದು ಚಂದ್ರ ಬೋಸ್ ಹೇಳಿದ್ದಾರೆ.
ಡಿಜಿಟಲೀಕರಣಗೊಂಡ ಈ ರಹಸ್ಯ ಕಡತಗಳನ್ನು ಪ್ರಧಾನಿ ಮೋದಿಯವರು ಶನಿವಾರ ನ್ಯಾಶನಲ್ ಆರ್ಖೈಸ್ ಆಫ್ ಇಂಡಿಯಾ (ಎನ್.ಎ.ಐ) ದಲ್ಲಿ ಸಾರ್ವಜನಿಕಗೊಳಿಸಿದರು. ಈ ಸಂದರ್ಭದಲ್ಲಿ ನೇತಾಜಿಯವರ ಕುಟುಂಬದ ಸದಸ್ಯರು, ಕೇಂದ್ರ ಸಚಿವರುಗಳಾದ ಮಹೇಶ್ ಶರ್ಮ ಮತ್ತು ಬಾಬುಲ್ ಸುಪ್ರಿಯೋ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಚಂದ್ರ ಬೋಸ್, 'ಪ್ರಧಾನಿಯವರ ಈ ಕ್ರಮವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಭಾರತದಲ್ಲಿ ಇದೊಂದು ಪಾರದರ್ಶಕತೆಯ ದಿನ' ಎಂದು ಬಣ್ಣಿಸಿದರು.
ನಂತರ ಪ್ರಧಾನಿ ಮೋದಿ ಹಾಗೂ ಅವರ ಸಹೋದ್ಯೋಗಿಗಳು ಪ್ರದರ್ಶನಕ್ಕಿಟ್ಟ ಹಲವಾರು ಕಡತಗಳನ್ನು ವೀಕ್ಷಿಸಿದರು. ಅಲ್ಲದೆ, ಪ್ರಧಾನಿ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕುಟುಂಬದ ಸದಸ್ಯರೊಡನೆ ಮಾತನಾಡಿದರು.
ಎನ್.ಅ.ಐ. ಪ್ರತಿ ತಿಂಗಳು ಡಿಜಿಟಲೀಕರಣಗೊಂಡ 25 ಕಡತಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಿದೆ.
ಕಳೆದ ವರ್ಷ ಒಕ್ಟೋಬರದಲ್ಲಿ ನೇತಾಜಿ ಕುಟುಂಬಕ್ಕೆ ಪ್ರಧಾನಿ ಮೋದಿಯವರು ಈ ಕಡತಗಳನ್ನು ಬಹಿರಂಗಗೊಳಿಸುವುದಾಗಿ ಭರವಸೆ ನೀಡಿದ್ದರು. ಇದರಿಂದಾಗಿ ಕುಟುಂಬದ ಹಾಗೂ ದೇಶದ ಜನತೆಯ ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ನೇತಾಜಿ ಸಾವಿನ ಬಗ್ಗೆ ತನಿಖೆ ನಡೆಸಲು ಈ ಹಿಂದೆ ನೇಮಕವಾದ ಎರಡು ತನಿಖಾ ಆಯೋಗಗಳು ನೇತಾಜಿಯವರು ಆಗಸ್ಟ್ 18, 1945ರಂದು ತಾಯ್ಪೆಯಲ್ಲಿ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದರು ಎಂದು ಹೇಳಿದ್ದರೆ, ನ್ಯಾಯಮೂರ್ತಿ ಕೆ.ಕೆ.ಮುಖರ್ಜಿ ನೇತೃತ್ವದ ಮೂರನೇ ಆಯೋಗ ಅವರು ವಿಮಾನ ಪತನದಿಂದ ಸತ್ತಿರಲಿಲ್ಲ, ಬದಲಾಗಿ ಇನ್ನಷ್ಟು ಕಾಲ ಜೀವಿತರಾಗಿದ್ದರು ಎಂದು ಹೇಳಿತ್ತು. ಈ ವಿಚಾರವಾಗಿ ನೇತಾಜಿ ಕುಟುಂಬದಲ್ಲೇ
ಒಡಕು ಉಂಟಾಗಿತ್ತು.
ಬಹಿರಂಗಗೊಂಡ ಕಡತಗಳಲ್ಲಿ ಮೊದಲ 33 ಕಡತಗಳು ಪ್ರಧಾನಿಯವರ ಕಚೇರಿಗೆ ಸಂಬಂಧಿಸಿದವಾಗಿದ್ದು ಇವನ್ನು ಕಳೆದ ಡಿಸೆಂಬರ ನಲ್ಲಿ ಎನ್.ಎ.ಐ. ಗೆ ವರ್ಗಾಯಿಸಲಾಗಿತ್ತು. ಉಳಿದ ಕಡತಗಳನ್ನು ವಿದೇಶಾಂಗ ಹಾಗೂ ಗೃಹ ಸಚಿವಾಲಯಗಳು ಕ್ರಮೇಣ ಎನ್.ಎ.ಐ. ಗೆ ಹಸ್ತಾಂತರಿಸಿವೆ.
'ಈ ಹಿಂದಿನ ಸರಕಾರಕ್ಕೆ ಹೋಲಿಸಿದರೆ ಈ ಸರಕಾರದ ವರ್ತನೆಯಲ್ಲಿ ಬದಲಾವಣೆ ಇದೆ. ಮೊದಲಾಗಿ, ನೇತಾಜಿಯವರ ಬಗೆಗಿನ ಸತ್ಯವನ್ನು ಮುಚ್ಚಿಡುವ ಕಾರ್ಯ ಇದರಿಂದ ಕೊನೆಗೊಂಡಿದೆ. ಅಲ್ಲದೆ, ಇದು ನೇತಾಜಿಯವರ ಬಗ್ಗೆ ಸತ್ಯವನ್ನು ಬಹಿರಂಗಗೊಳಿಸುವ ಬಹು ದೊಡ್ಡ ಹೆಜ್ಜೆಯಾಗಿದೆ' ಎಂದು ಚಂದ್ರ ಬೋಸ್ ಹೇಳಿದ್ದಾರೆ.
'ಸತ್ಯವನ್ನು ಮರೆಮಾಚುವ ಸಲುವಾಗಿ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅತ್ಯಂತ ಮುಖ್ಯವಾದ ಕೆಲವು ಕಡತಗಳನ್ನು ನಾಶಗೊಳಿಸಲಾಗಿದೆ, ಇದನ್ನು ಅರಿಯಲು ನಮ್ಮ ಹತ್ತಿರ ದಾಖಲೆಗಳಿವೆ. ಹಾಗಾಗಿ ಭಾರತ ಸರಕಾರ ಜರ್ಮನಿ, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ (ಈ ಬಗ್ಗೆ) ಇರುವ ಕಡತಗಳನ್ನು ಬಹಿರಂಗಗೊಳಿಸಲು ಪ್ರಯತ್ನಿಸಬೇಕು' ಎಂದು ಚಂದ್ರ ಬೋಸ್ ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೇತಾಜಿಯವರ ಸೋದರಳಿಯ ಅರ್ಧೇಂದು ಬೋಸ್ ಮಾತನಾಡಿ,'ಬೋಸ್ ಕುಟುಂಬ ಹಾಗೂ ಇಡೀ ದೇಶ ಈ ಕ್ಷಣಕ್ಕಾಗಿ ಕಳೆದ ಏಳು ದಶಕಗಳಿಂದ ಕಾಯುತ್ತಿತ್ತು. ಈ ಕಡತಗಳು (ನೇತಾಜಿ ಬಗ್ಗೆ) ಬೆಳಕು ಚೆಲ್ಲಲು ಸಹಕಾರಿಯಾಗುತ್ತವೆ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದರು.
ಅಲ್ಲದೆ, ರಷ್ಯಾದ ಕೆಜಿಬಿ (ಬೇಹಿಗಾರಿಕಾ ಸಂಸ್ಥೆ) ಹಾಗೂ ಜರ್ಮನಿ, ಇಂಗ್ಲೆಂಡ್, ಅಮೆರಿಕಗಳ ಸಂಗ್ರಹದಲ್ಲಿರುವ ಕಡತಗಳು ಇನ್ನಷ್ಟು ಮಾಹಿತಿಗಳನ್ನು ಹೊರತರಬಲ್ಲುದು. ಕೆಲವು ಮಹತ್ವದ ಕಡತಗಳನ್ನು (ಭಾರತದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ) ನಾಶಪಡಿಸಲಾಗಿದೆ ಎಂಬುದು ನಮ್ಮ ಆತಂಕ' ಎಂದು ಅವರು ಹೇಳಿದರು.
ಒಟ್ತಿನಲ್ಲಿ, ನೇತಾಜಿ ಬಗ್ಗೆ ನೆಹರೂ ಸರಕಾರ ಕೈಗೊಂಡ ಬೇಹುಗಾರಿಕೆ ಕಾರ್ಯ, ರಹಸ್ಯ ಪತ್ರ ವಿನಿಮಯ ಮುಂತಾದ ವಿಚಾರಗಳು ಈಗ ಬಹಿರಂಗಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಇವು ಸಾಕಷ್ಟು ಮುಜುಗರ ತರುವುದು ಖಚಿತ.