ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದು, ಮೇ.17ರಂದು ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯ ರಹಸ್ಯ ಬಯಲಾಗುವ ಸಾಧ್ಯತೆ ಇದೆ.
ಜರ್ಮನಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಸುಭಾಷ್ ಚಂದ್ರ ಬೋಸರ ಸೋದರ ಸಂಬಂಧಿ ಸೂರ್ಯ ಕುಮಾರ್ ಬೋಸ್, ನೇತಾಜಿ ನಿಗೂಢ ಕಣ್ಮರೆಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಗೊಳಿಸಬೇಕೆಂದು ಮನವಿ ಸಲ್ಲಿಸಿದರು. ದಾಖಲೆ ಬಹಿರಂಗಪಡಿಸಲು ಸಮಿತಿ ರಚಿಸಿ ತಾವೇ ಈ ಬಗ್ಗೆ ಗಮನ ಹರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು.
ಇದೀಗ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರನ್ನು ತಮ್ಮ ಭೇಟಿಗೆ ಆಹ್ವಾನಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಮೇ.17ರಂದು ನೇತಾಜಿ ಕಣ್ಮರೆಗೆ ಸಂಬಂಧಿಸಿದಂತೆ ರಹಸ್ಯ ದಾಖಲೆಗಳು ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸುಭಾಷ್ ಚಂದ್ರ ಬೋಸರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯ ನಂತರ 1948ರಿಂದ 1968ರವರೆಗೆ ಸುಮಾರು 20 ವರ್ಷಗಳ ಕಾಲ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ಬೋಸ್ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು ಎಂಬ ಅಂಶ ಬಯಲಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸುಭಾಷ್ ಚಂದ್ರ ಬೋಸರ ಕುಟುಂಬ ಸದಸ್ಯರು, ಕೇಂದ್ರ ಸರ್ಕಾರ ದಾಖಲೆಗಳನ್ನು ಬಹಿರಂಗಗೊಳಿಸಬೇಕೆಂದು ಒತ್ತಾಯಿಸಿದ್ದರು.