ನವದೆಹಲಿ : ಮಹಾತ್ಮಾ ಗಾಂಧಿ ಹತ್ಯೆ ಹಾಗೂ ಇಟಲಿ ನಂಟಿನ ಕುರಿತು ವಿವರಗಳನ್ನು ಆಗಸ್ಟ್ 15ರಂದು ನಿಡಿವುದಾಗಿ ವಿವಾದಿತ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸ್ವಾಮಿ ಟ್ವೀಟ್ ಮಾಡಿರುವ ಅವರು, "ಮಹಾತ್ಮಾ ಗಾಂಧಿ ಅವರ ಹತ್ಯೆಗೂ ಇಟಲಿಗೂ ರಹಸ್ಯವಾದ ಕೊಂಡಿಯೊಂದು ಇದೆ. ನತ್ತುರಾಮ್ ಗೋಡ್ಸೆ ಗಾಂಧಿಯನ್ನು ಕೊಲ್ಲಲು ಬಳಸಿದ್ದ ಪಿಸ್ತೂಲು ಇಟಲಿಯಿಂದ ಆಮದಾಗಿದೆ. ಗಾಂಧಿ ಹತ್ಯೆಗೂ ಇಟಲಿಗೂ ಇರುವ ನಂಟಿನ ಬಗ್ಗೆ ನಾನು ಆಗಸ್ಟ್ 15ರಂದು ಸುದ್ದಿಗೋಷ್ಠಿ ನಡೆಸಿ ಅದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಲಿದ್ದೇನೆ' ಎಂದು ಹೇಳಿದ್ದಾರೆ.
ಇದೇ ವೇಳೆ ಮಹಾತ್ಮಾ ಗಾಂಧಿಯವರ ಹತ್ಯೆ ಕುರಿತಾಗಿ ಸಂಸತ್ತಿನಲ್ಲಿ ವಿಸ್ತೃತವಾದ ಚರ್ಚೆ ನಡೆಯಬೇಕೆಂದು ಸ್ವಾಮಿ ಆಗ್ರಹಿಸಿದ್ದಾರೆ.
ಮಹಾತ್ಮಾ ಗಾಂಧಿಯವರ ಹತ್ಯೆ ಕುರಿತಾದ ರಹಸ್ಯ ಕಡತಗಳನ್ನು ಈಚೆಗೆ ಬಹಿರಂಗಪಡಿಸಲಾಗಿದ್ದು ಅವುಗಳಲ್ಲಿನ ಮಾಹಿತಿಯ ಪ್ರಕಾರ ಗಾಂಧಿ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಲಾಗಿಲ್ಲ. ಆದುದರಿಂದ ಗಾಂಧಿಯನ್ನು ನತ್ತು ರಾಮ್ ಗೋಡ್ಸೆಯೇ ಗುಂಡಿಕ್ಕಿ ಸಾಯಿಸಿರುವುದನ್ನು ಹಾಗೂ ಗಾಂಧಿ ಅವರು ಗುಂಡೇಟಿನಿಂದಲೇ ಸತ್ತರೆಂಬುದನ್ನು ವೈದ್ಯಕೀಯವಾಗಿ ಖಚಿತ ಪಡಿಸಿಕೊಳ್ಳಲಾಗಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.
ಗಾಂಧಿಯ ಮೇಲೆ ನಿಖರವಾಗಿ ಎಷ್ಟು ಗುಂಡುಗಳು ಹಾರಿದ್ದವು ಎಂಬುದು ಖಚಿತವಾಗಿಲ್ಲ. ಸುದ್ದಿ ಪತ್ರಿಕೆಗಳು ಅಂದು ಪ್ರಕಟಿಸಿದ್ದ ವರದಿಗಳ ಪ್ರಕಾರ ಗಾಂಧಿಗೆ ನಾಲ್ಕು ಗುಂಡುಗಳು ತಗುಲಿದ್ದವು. ಸರಕಾರಿ ವಕೀಲರ ಪ್ರಕಾರ ಮೂರು ಗುಂಡುಗಳು ತಗುಲಿದ್ದವು ಮತ್ತು ಗೋಡ್ಸೆಯ ಪಿಸ್ತೂಲಿನಲ್ಲಿ ಮೂರು ಖಾಲಿ ಚೇಂಬರ್ಗಳು ಇದ್ದವು. ಆದರೆ ಗೋಡ್ಸೆ ಕೋರ್ಟಿಗೆ ಹೇಳಿರುವ ಪ್ರಕಾರ ಆತ ಗಾಂಧಿ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದಾನೆ. ಆದುದರಿಂದ ಗಾಂಧೀಜಿಯವರ ಹತ್ಯೆ ಕುರಿತಾದ ನಿಖರತೆ ಮತ್ತು ಸತ್ಯ ಶೋಧನೆಗಾಗಿ ಅಂದಿನ ಕಡತಗಳ ಪುನರವಲೋಕನ ಮಾಡುವುದು ಅಗತ್ಯವಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.