ವರ್ಜೀನಿಯ, ಅಮೆರಿಕ : ವಿದೇಶಗಳಲ್ಲಿ ಕೂಡಿಟ್ಟ ಅಂದಾಜು 125 ಲಕ್ಷ ಕೋಟಿ ರೂ. ಕಪ್ಪುಹಣವನ್ನು ಮೋದಿ ಸರಕಾರ ಭಾರತಕ್ಕೆ ವಾಪಸ್ ತರುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ವಾಶಿಂಗ್ಟನ್ ಡಿ.ಸಿ. ಹತ್ತಿರದ ವರ್ಜೀನಿಯಾ ಪಟ್ಟಣದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತ, 'ಪ್ರಧಾನಿ ನರೇಂದ್ರ ಮೋದಿಯವರ ಸ್ವಭಾವ ತಿಳಿದಿರುವ ನಾನು ಈ ಬಗ್ಗೆ (ಕಪ್ಪು ಹಣ ವಾಪಸ್ ತರುವ) ವಿಶ್ವಾಸ ಹೊಂದಿದ್ದೇನೆ' ಎಂದು ಸ್ವಾಮಿ ಹೇಳಿದ್ದಾರೆ.
ಕಪ್ಪು ಹಣ ಭಾರತಕ್ಕೆ ವಾಪಸ್ ತರುವುದು ಕಷ್ಟಕರವಲ್ಲ ಎಂದು ಅಭಿಪ್ರಾಯಪಟ್ಟ ಸುಬ್ರಹ್ಮಣ್ಯನ್ ಸ್ವಾಮಿ, ಈ ಬಗ್ಗೆ ಮೋದಿ ಸರಕಾರ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊೞುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಇತ್ತೀಚೆಗೆ ನಿಧನ ಹೊಂದಿದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ವರ್ಜೀನಿಯಾದ ಸ್ಥಳೀಯ ಸಂಸ್ಥೆ ಆಯೋಜಿಸಿದ 'ಲೀಡ್ ಇಂಡಿಯಾ 2020' ಎಂಬ ಸಮಾರಂಭದಲ್ಲಿ ಸ್ವಾಮಿ ಮಾತನಾಡುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರಿದು, 'ಕೆಲವೊಂದು ದೃಢವಾದ ಆರ್ಥಿಕ ಸುಧಾರಣೆ ಜಾರಿಗೆ ತರುವುದರಿಂದ ಭಾರತ ವಾರ್ಷಿಕ ಶೇ.12ರ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯವಿದೆ' ಎಂದು ಸ್ವಾಮಿ ಹೇಳಿದರು.
ಸರಕಾರ ದೇಶದಲ್ಲಿ ಆದಾಯ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಸಹ ಸ್ವಾಮಿ ಅಭಿಪ್ರಾಯಪಟ್ಟರು.
ಆರ್ಥಿಕ ಉದಾರೀಕರಣ ಮತ್ತು ಸುಧಾರಣೆ ತರಲು ಧೈರ್ಯ ಹಾಗೂ ದೃಢ ನಿರ್ಧಾರಗಳನ್ನು ಕೈಗೊಂಡ ಮಾಜಿ ಪ್ರಧಾನಿ ನರಸಿಂಹ ರಾವ್ ಅವರನ್ನು ಹೊಗಳಿದ ಸ್ವಾಮಿ, ನರಸಿಂಹ ರಾವ್ ಅವರಿಗೆ ಮುಂದಿನ ವರ್ಷದ ಗಣರಾಜ್ಯ ದಿನಾಚರಣೆ ದಿವಸ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.