ಬರ್ಲಿನ್ : ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಕುಟುಂಬ ವರ್ಗದವರ ಮೇಲೆ ಜವಾಹರಲಾಲ್ ನೆಹರು ಸರ್ಕಾರ ಬೇಹುಗಾರಿಕೆ ನಡೆಸಿತ್ತು ಎಂಬ ವರದಿಗಳ ಬೆನ್ನಲ್ಲೇ ಬೋಸ್ ವಂಶಸ್ಥರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಜರ್ಮನಿಯಲ್ಲಿ ಭೇಟಿಯಾಗಿ ನೇತಾಜಿಗೆ ಸಂಬಂಧಿಸಿದ ಎಲ್ಲ ರಹಸ್ಯ ದಾಖಲೆಗಳನ್ನೂ ಬಹಿರಂಗಪಡಿಸುವಂತೆ ಒತ್ತಾಯಪಡಿಸಿದ್ದಾರೆ.
ಜರ್ಮನ್ ಪ್ರವಾಸದಲ್ಲಿರುವ ಮೋದಿ ಅವರಿಗಾಗಿ ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ವಿಜಯ್ ಗೋಖಲೆ ಅವರು ಸ್ವಾಗತ ಸಮಾರಂಭವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನೆಹರು ಅವರ ವಂಶಸ್ಥರಾದ ಸೂರ್ಯಕುಮಾರ್ ಬೋಸ್ ಅವರೂ ಪಾಲ್ಗೊಂಡು ಮೋದಿ ಅವರನ್ನು ಭೇಟಿ ಮಾಡಿ ಈ ಕುರಿತು ಆಗ್ರಹ ಮಂಡಿಸಿದರು.
ಸತ್ಯ ಹೊರಬರಬೇಕು ಎಂಬುದು ತಮ್ಮ ಅಭಿಪ್ರಾಯವೂ ಆಗಿದೆ. ಹೀಗಾಗಿ ರಹಸ್ಯ ದಾಖಲೆ ಬಹಿರಂಗಪಡಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಈ ವೇಳೆ ಮೋದಿ ಭರವಸೆ ನೀಡಿದರು ಎಂದು ಸೂರ್ಯಕುಮಾರ್ ಅವರು ತಿಳಿಸಿದ್ದಾರೆ.
ಹ್ಯಾಮ್ ಬರ್ಗ್ನಲ್ಲಿರುವ ಭಾರತ-ಜರ್ಮನಿ ಸಂಘದ ಅಧ್ಯಕ್ಷರೂ ಆಗಿರುವ ಕಾರಣಕ್ಕೆ ಸೂರ್ಯಕುಮಾರ್ ಅವರನ್ನು ಮೋದಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಮೋದಿ-ಸೂರ್ಯಕುಮಾರ್ ಬೋಸ್ ಭೇಟಿಯ ಬೆನ್ನಲ್ಲೇ ಕೋಲ್ಕತಾದಲ್ಲಿನ ಬೋಸ್ ಅವರ ವಂಶಸ್ಥರು ಮೆರವಣಿಗೆ ನಡೆಸಿ, ಬೋಸ್ ಕುರಿತ ದಾಖಲೆಗಳನ್ನು ಬಹಿರಂಗಪಡಿಸುವಂತೆ ಮೋದಿ ಸರ್ಕಾರವನ್ನು ಆಗ್ರಹಿಸಿದರು. ಇದಲ್ಲದೆ, ದಾಖಲೆ ಬಹಿರಂಗಪಡಿಸುವ ಬಗ್ಗೆ ಪ್ರಧಾನಿ ನೀಡಿರುವ ಭರವಸೆ ಸ್ವಾಗತಾರ್ಹ. ಇನ್ನು ಅವರಿಂದ ಕೆಲಸ ನಿರೀಕ್ಷಿಸಲಾಗುವುದು ಎಂದು ವಂಶಸ್ಥರು ತಿಳಿಸಿದ್ದಾರೆ.