ನವದೆಹಲಿ : ಪತ್ರಕರ್ತರನ್ನು ಪ್ರಾಸ್ಟಿಟ್ಯೂಟ್ಸ್ ಎಂಬರ್ಥ ಬರುವಂತೆ ಪ್ರೆಸ್ಟಿಟ್ಯೂಟ್ಸ್ ಎಂಬ ಪದವನ್ನು ಬಳಸಿ ವ್ಯಂಗ್ಯದಿಂದ ಕರೆದಿರುವ ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈ ಟೀಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.
ವಿ.ಕೆ.ಸಿಂಗ್ ಅವರ ದ್ವಂದ್ವಾರ್ಥ ಮತ್ತು ಧ್ವನ್ಯಾರ್ಥದ ಈ ಪದಬಳಕೆ ಖಂಡನೀಯವಾಗಿದ್ದು ಇದು ಅವರ ಸಂವೇದನಾರಹಿತ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಹೇಳಿದ್ದು, ಎಡ ಪಕ್ಷಗಳು ಸಿಂಗ್ ಅವರ ಮನೋಸ್ಥಿತಿಯನ್ನು ಇದು ಬಿಂಬಿಸುತ್ತಿದೆ ಎಂದು ದೂರಿವೆ.
ಪತ್ರಕರ್ತರನ್ನು ಪ್ರೆಸ್ಟಿಟ್ಯೂಟ್ಸ್ ಎಂದು ಜನರಲ್ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಹೇಳಿದ್ದಾರೆ. ಯೆಮೆನ್ ನಲ್ಲಿನ ಭಾರತೀಯರ ರಕ್ಷಣಾ ಕಾರ್ಯಾಚರಣೆಗಿಂತಲೂ ಮಿಗಿಲಾದ ಮಜಾ ತನಗೆ ಪಾಕ್ ಹೈಕಮಿಶನ್ ಗೆ ಭೇಟಿ ಕೊಟ್ಟಾಗ ಸಿಕ್ಕಿತ್ತೆಂಬ ತಮ್ಮ ಹೇಳಿಕೆಯನ್ನು ಪತ್ರಿಕೆಗಳು ಬೇರೆಯೇ ಅರ್ಥಕೊಟ್ಟು ಪ್ರಚುರಪಡಿಸಿದ್ದಕ್ಕೆ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಅವರು ತಮ್ಮ ಟ್ವೀಟ್ ನಲ್ಲಿ "ಗೆಳೆಯರೇ, ಪ್ರೆಸ್ಟಿಟ್ಯೂಟ್ಸ್ಗಳಿಂದ ನೀವು ಹೆಚ್ಚಿನದ್ದೇನನ್ನು ನಿರೀಕ್ಷಿಸಬಹುದು' ಎಂದು ವ್ಯಂಗ್ಯದಿಂದ ಕಿಡಿಕಾರಿದ್ದರು.
ಆದರೆ ಅವರ ಈ ವಿಶೇಷ ಒಳಾರ್ಥದ ಟ್ವೀಟ್ ಹುಟ್ಟಿಸಿದ ವ್ಯಾಪಕ ವಿವಾದವನ್ನು ಬಗೆಹರಿಸಲು ಸಿಂಗ್ ಅವರು ಜಿಬೋಟಿಯಲ್ಲಿ ಪತ್ರಿಕಾಗೋಷ್ಠಿ ಕರೆದು, ಯೆಮೆನ್ ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಗಿಂತಲೂ ಪಾಕ್ ಹೈಕಮಿಶನ್ ಗೆ ಭೇಟಿ ಕೊಡುವುದೇ ತನಗೆ ಹೆಚ್ಚು ಖುಷಿ, ಮಜಾ ನೀಡಿತೆಂಬುದನ್ನು ತಾನು ಹೇಳಿರುವುದರಲ್ಲಿ ಆಶ್ಚರ್ಯ ಹುಟ್ಟಿಸುವಂಥದ್ದು ಮತ್ತು ಅಬದ್ಧವಾದುದು ಏನಿದೆ ಎಂದು ಸಿಂಗ್ ಪತ್ರಕರ್ತರನ್ನೇ ಪ್ರಶ್ನಿಸಿದರು.
ಪಾಕ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ದಿಲ್ಲಿಯಲ್ಲಿನ ಪಾಕ್ ಹೈಕಮಿಶನ್ ಕಾರ್ಯಾಲಯಕ್ಕೆ ಹೋಗಿದ್ದ ಸಿಂಗ್ ಅವರು ಅನಂತರದಲ್ಲಿ "ಅಲ್ಲಿಗೆ ಹೋದದ್ದೇ ತನಗೊಂದು ದೊಡ್ಡ ಜುಗುಪ್ಸೆಯಾಗಿ ಕಾಡಿತ್ತು' ಎಂದು ವಿವಾದವನ್ನು ಸೃಷ್ಟಿಸಿದ್ದರು.