ನವದೆಹಲಿ : ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಕೆಟ್ಟ ರೀತಿಯಲ್ಲಿ ಪ್ರಚಾರ ನಡೆಯುತ್ತಿರುವುದಕ್ಕೆ ಶಸ್ತ್ರಾಸ್ತ್ರ ಲಾಬಿ ಕಾರಣ ಎಂದು ದೂಷಿಸಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್, ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ತಂದಿರುವುದಾಗಿ ತಿಳಿಸಿದ್ದಾರೆ.
ನನ್ನನ್ನು ದಮನ ಮಾಡಲು ಶಸ್ತ್ರಾಸ್ತ್ರ ಲಾಬಿ ಕೆಲಸ ಮಾಡುತ್ತಿದೆ. ಇದರ ಫಲವಾಗಿ ಮೋಸದ ಪ್ರಚಾರ ನಡೆಯುತ್ತಿದೆ. ಸೇನಾ ಮುಖ್ಯಸ್ಥನಾಗಿದ್ದಾಗ ನನ್ನನ್ನು ದಮನಗೊಳಿಸಲು ಶಸ್ತ್ರಾಸ್ತ್ರ ಲಾಬಿಗೆ ಆಗಿರಲಿಲ್ಲ. ಹೀಗಾಗಿ ಅವರು ಅದನ್ನು ಮುಂದುವ ರಿಸಿದ್ದಾರೆ. ಇದರಲ್ಲಿ ಸೇನೆಯ ಹಿರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾ.23ರಂದು ಪಾಕಿಸ್ತಾನ ಸಂಸ್ಥಾಪನಾ ದಿನಾಚರಣೆ ನಿಮಿತ್ತ ದೆಹಲಿಯಲ್ಲಿನ ಪಾಕ್ ಹೈಕಮಿಷನ್ ಕಚೇರಿಗೆ ತೆರಳಿದ್ದ ಸಿಂಗ್ ಅವರು ಅಸಹ್ಯ ಎಂದು ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಯೆಮೆನ್ ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಪಾಕ್ ಹೈಕಮಿಷನ್ ಕಚೇರಿಗೆ ನೀಡಿದ ಭೇಟಿ ಜತೆ ಸಮೀಕರಿಸಿದ್ದು ಕೂಡ ಚರ್ಚೆಗೆ ಕಾರಣವಾಗಿತ್ತು.