ನವದೆಹಲಿ : ಬಹುಕೋಟಿ ಕಲ್ಲಿದ್ದಲು ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಸಮನ್ಸ್ ನೀಡಿದೆ.
ಮನಮೋಹನ್ ಸಿಂಗ್ ಅವರೊಂದಿಗೆ ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಪಿ.ಸಿ ಪರಾಖ್, ಹಿಂಡಾಲ್ಕೋ ಕಂಪನಿಯ ಡಿ ಭಟ್ಟಾಚಾರ್ಯ ಹಾಗೂ ಶುಭೇಂದು ಅಮಿತಾಭ್ ಗೂ ಸಮನ್ಸ್ ನೀಡಲಾಗಿದೆ. ಅಪರಾಧಕ್ಕೆ ಸಂಚು, ವಿಶ್ವಾಸದ್ರೋಹ ಬಗೆದಿರುವ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಸಮನ್ಸ್ ನೀಡಿದೆ. ಏ.8ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿರುವವರಿಗೆ ಸೂಚನೆ ನೀಡಿದೆ.
ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು.
ಬಹುಕೋಟಿ ಕಲ್ಲಿದ್ದಲು ಹಗರಣ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿತ್ತು. ಹಗರಣ ನಡೆದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಕಲ್ಲಿದ್ದಲು ಖಾತೆಯನ್ನೂ ನಿರ್ವಹಿಸುತ್ತಿದ್ದರು.