ನವದೆಹಲಿ : ಯುಪಿಎ-2 ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತೀರ್ಪು ಪ್ರಕಟವಾಗಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ವಂಚಿಸಿ ಜಾರ್ಖಂಡ್ ನಲ್ಲಿ ಕಲ್ಲಿದ್ದಲು ಗಣಿ ಮಂಜೂರು ಮಾಡಿಸಿಕೊಂಡ ಪ್ರಕರಣದಲ್ಲಿ ಜಾರ್ಖಂಡ್ ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ಅದರ ಇಬ್ಬರು ನಿರ್ದೇಶಕರು ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಕಂಪನಿಯ ನಿರ್ದೇಶಕರು ಹಾಗೂ ಸೋದರರೂ ಆಗಿರುವ ಆರ್.ಎಸ್.ರುಂಗ್ಟಾ ಹಾಗೂ ಆರ್.ಸಿ.ರುಂಗ್ಟಾ ಅವರು ಜಾರ್ಖಂಡ್ ನ ಉತ್ತರ ಧಾಡು ಕಲ್ಲಿದ್ದಲು ಗಣಿ ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಂಚನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪದಡಿ ಅವರನ್ನು ದೋಷಿಗಳು ಎಂದು ಪರಿಗಣಿಸಲಾಗಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು ಈ ಕುರಿತು 132 ಪುಟಗಳ ತೀರ್ಪು ನೀಡಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಹಾಜರಿದ್ದ ರುಂಗ್ಟಾ ಸೋದರರನ್ನು ವಶಕ್ಕೆ ತೆಗೆದುಕೊಳ್ಳಲು ಸಿಬಿಐಗೆ ಆದೇಶಿಸಿದ್ದಾರೆ. ಮಾ.31ರಂದು ಶಿಕ್ಷೆಯ ಪ್ರಮಾಣ ನಿಗದಿಯಾಗಲಿದೆ.
ಕಲ್ಲಿದ್ದಲು ಗಣಿ ಮಂಜೂರು ಮಾಡಿಸಿಕೊಳ್ಳಲು 79 ಎಕರೆ ಜಮೀನು ಹೊಂದಿರಬೇಕು ಎಂಬ ನಿಯಮವಿತ್ತು. ಆದರೆ ಗಣಿ ಮಂಜೂರಾತಿಗೆ ರಚನೆಯಾಗಿದ್ದ ಪರಿಶೀಲನಾ ಸಮಿತಿಗೆ ಈ ಕುರಿತು ರುಂಗ್ಟಾ ಸೋದರರು ಸುಳ್ಳು ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ಸೋದರರ ಜಾರ್ಖಂಡ್ ಇಸ್ಪಾತ್ ಕಂಪನಿಗೆ 2005ರಲ್ಲಿ ಗಣಿ ಮಂಜೂರಾಗಿತ್ತು. ಆದರೆ, ಕಲ್ಲಿದ್ದಲು ಗಣಿ ಗುತ್ತಿಗೆ ಮಂಜೂರಾದಾಗ ರುಂಗ್ಟಾ ಸೋದರರ ಕಂಪನಿ ಬಳಿ ಕೇವಲ 32 ಎಕರೆ ಮಾತ್ರವೇ ಜಮೀನಿತ್ತು ಎಂಬ ವಿಷಯ ತಿಳಿದುಬಂದಿತ್ತು.